ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಜಿಯೋಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಪಡೆದ ಇಂಡಿ ಲಿಂಬೆಗೆ ಕಳೆದೆರಡು ವಾರಗಳ ಹಿಂದೆ ಪಿಎಂ ಮೋದಿಯವರ ಮನ್‌ ಕೀ ಬಾತ್‌ನಲ್ಲಿ ಇಂಡಿ ಲಿಂಬೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವುದು ಇಂಡಿ ಲಿಂಬೆಗೆ ಅಂತಾರಾಷ್ಟ್ರೀಯಮಟ್ಟದ ಮಾರುಕಟ್ಟೆಯಲ್ಲಿ ಬೇಡಿಕೆ ಇಮ್ಮಡಿಯಾಗುವಂತೆ ಮಾಡಿದೆ. ಹೀಗಾಗಿ ಸದ್ಯ ಸಿಎಂ ಸಿದ್ದರಾಮಯ್ಯನವರು ಮಂಡಿಸುವ ಬಹುನಿರೀಕ್ಷಿತ ದಾಖಲೆಯ 17ನೇ ಬಜೆಟ್‌ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಿಂಬೆ ರಪ್ತು ಪ್ರಮಾಣ ಹೆಚ್ಚಿಸಲು ವಿಶೇಷ ಪ್ಯಾಕೇಜ್‌ ಒದಗಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ, ನಿರೀಕ್ಷೆಯೂ ಹೆಚ್ಚಿಸಿದೆ.

ನಿಂಬೆ ಬೆಳೆಗಾರರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ದೂರದೃಷ್ಟಿ ಚಿಂತನೆಯನ್ನಿಟ್ಟುಕೊಂಡ ಶಾಸಕ ಯಶವಂತರಾಯಗೌಡ ಪಾಟೀಲರು, ಇಂಡಿಯಲ್ಲಿಯೇ ರಾಜ್ಯಮಟ್ಟದ ನಿಂಬೆ ಅಭಿವೃದ್ಧಿ ಮಂಡಳಿ ಕಚೇರಿ ಆರಂಭಿಸುವಲ್ಲಿ ಯಶಸ್ವಿಯಾಗಿರುವುದು ಐತಿಹಾಸ. ಹಾಗೆಯೇ ಜಿಐ ಟ್ಯಾಗ್ ದೊರಕಿಸಿಕೊಟ್ಟಿದ್ದರ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಇಂಡಿ ಕಾಗ್ಹೀ ಲಗ್ಗೆ ಇಟ್ಟಿದೆ. ಈ ಕುರಿತು ಆಕಾಶವಾಣಿ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ಲಾಘನೆ ವ್ಯಕ್ತಪಡಿಸಿರುವುದು ಲಿಂಬೆಯ ಅಂತಾರಾಷ್ಟ್ರೀಯ ಮಾರುಕಟ್ಟೆಯ ವಿಸ್ತೀರ್ಣ ಹೆಚ್ಚಿಸಿದ್ದಲ್ಲದೇ ಮಾರಾಟದ ವೇಗವನ್ನು ಹೆಚ್ಚಿಸುವಂತೆ ಮಾಡಿದೆ. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಲಿಂಬೆ ವ್ಯಾಪಾರ ಹಾಗೂ ಲಿಂಬೆ ಬೆಳೆಗಾರರ ಉತ್ತೇಜಿಸುವ ಭವಿಷ್ಯ ಯೋಜನೆಗಳು ಇದೇ ಬಜೆಟ್‌ನಲ್ಲಿ ಘೋಷಣೆಯಾಗಬೇಕಾದ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೇಲಿದೆ.ದೇಶದ ಪ್ರಧಾನಮಂತ್ರಿ ಇಂಡಿ ನಿಂಬೆ ವಿದೇಶಗಳಿಗೆ ರಫ್ತಾಗುವುದರ ಕುರಿತಾದ ಶ್ಲಾಘನೆ ಸುಮ್ಮನೆ ಮಾತಲ್ಲ. ಇಂಡಿ ನಿಂಬೆ ಕುರಿತು ಪ್ರಧಾನಮಂತ್ರಿ ಅವರು ಹೇಳುವಷ್ಟರ ಮಟ್ಟಿಗೆ ಇಂಡಿ ನಿಂಬೆ ಬೆಳೆದು ಹೆಸರು ಮಾಡಿದೆ. ಇದು ನಿಜಕ್ಕೂ ನಿಂಬೆ ಬೆಳೆಗಾರರ ಹರ್ಷ ಇಮ್ಮಡಿಗೊಳಿಸಿದೆ. ಗಡಿಭಾಗದ ನಿಂಬೆನಾಡು ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಕಾಗಜಿ ತಳಿಯ ನಿಂಬೆಗೆ ಭೀಮಾ ತೀರದ ಇಂಡಿ, ಚಡಚಣ, ಸಿಂದಗಿ ಭಾಗದಲ್ಲಿ ಕಾಗಜಿ ತಳಿಯ ನಿಂಬೆ ಘಮ ಮೂಗಿಗೆ ರಾಚುತ್ತಲೇ ಬಾಯಿಗೆ ನೀರೂರಿಸುತ್ತದೆ. ಗಾತ್ರದಲ್ಲಿ ಚಿಕ್ಕದಾದರೂ ಆಕರ್ಷಕ ಬಣ್ಣ, ತೆಳುವಾದ ಸಿಪ್ಪೆ, ಹೆಚ್ಚಿನ ರಸ ಮತ್ತು ವಿಶಿಷ್ಟ ಪರಿಮಳಕ್ಕೆ ಹೆಸರಾಗಿರುವ ಈ ಕಾಗಜಿ ತಳಿ ಹೆಚ್ಚಾಗಿ ಬೆಳೆಯುವುದು ಟ್ಯಾಗ್ ಲಭಿಸಿದಾಗಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಡಿ ನಿಂಬೆಗೆ ಬೇಡಿಕೆ ಹೆಚ್ಚಾಗಿದೆ.ಇಂಡಿಯಿಂದ ಬೆಂಗಳೂರು, ನೆರೆಯ ರಾಜ್ಯದ ಮುಂಬೈ, ಹೈದರಾಬಾದ್, ನವದೆಹಲಿ ಸೇರಿದಂತೆ ಮತ್ತಿತರ ಪ್ರಮುಖ ನಗರಗಳಿಗೆ ಇಂಡಿ ನಿಂಬೆ ಹಣ್ಣು ಹೋಗುತ್ತಿದೆ. ನೆರೆಯ ದೇಶಗಳಾದ ಬಾಂಗ್ಲಾದೇಶ, ನೇಪಾಳ, ದುಬೈ, ಅಬುದಾಬಿ, ಕುವೈತ್, ಶ್ರೀಲಂಕಾ, ಪಾಕಿಸ್ತಾನ ದೇಶಗಳಿಗೆ ಹಾಗೂ ಕಳೆದ ವರ್ಷ ಯುಎಇ ಸೇರಿದಂತೆ ಐರೋಪ್ಯ ರಾಷ್ಟ್ರಗಳು ಸೇರಿ ಸುಮಾರು 25 ದೇಶಗಳಿಗೆ ಉತ್ಕೃಷ್ಟ ಗುಣಮಟ್ಟದ ಲಿಂಬೆ ರಫ್ತು ಮಾಡಲಾಗುತ್ತಿದೆ. ಐರೋಪ್ಯ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದರಿಂದ ಬೆಳೆಗಾರರಿಗೆ ಉತ್ತಮ ಬೆಲೆಯೂ ದೊರೆತಿದೆ. ಈ ಹಿಂದೆ ಪ್ರತಿವರ್ಷ ₹350 ರಿಂದ ₹500 ಕೋಟಿಯವರೆಗೆ ವಹಿವಾಟು ನಡೆಯುತ್ತಿದ್ದ ಇಂಡಿ ನಿಂಬೆ ಇಂದು ₹600 ರಿಂದ ₹800 ಕೋಟಿ ವಹಿವಾಟು ನಡೆಯುತ್ತಿದೆ.ನಿಂಬೆ ಹಣ್ಣಿನ ಜೊತೆಗೆ ಇದೀಗ ಇಂಡಿ ತಾಲೂಕಿನಲ್ಲಿ ರೈತರು ಬೆಳೆಯುತ್ತಿರುವ ನಿಂಬೆ ಸಸಿಗಳಿಗೂ ಕೂಡಾ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೊರ ರಾಜ್ಯಗಳ ರೈತರು ಕೂಡ ಇಂಡಿ ನಿಂಬೆ ಸಸಿಗಳನ್ನು ಕೊಳ್ಳುತ್ತಿದ್ದಾರೆ. ನಿಂಬೆ ಉಪ ಉತ್ಪನ್ನಗಳಾದ ಜಾಮ್, ಜೆಲ್ಲಿ, ಜ್ಯೂಸ್ ಮತ್ತಿತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಅನೇಕ ಸಣ್ಣ ಕೈಗಾರಿಗಳು ಸ್ಥಾಪನೆಯಾಗಿ ಉದ್ಯೋಗವಕಾಶಗಳ ಪ್ರಮಾಣವೂ ಹೆಚ್ಚಾಗಿದೆ. ಲೇಮನ್ ಟೀ ಪಾಯಿಂಟ್‌ಗಳ ಸಂಖ್ಯೆ ಹೆಚ್ಚಾಗಿದೆ.ಇನ್ನಷ್ಟು ನೀರಾವರಿ ಯೋಜನೆಗಳು ಜಾರಿಯಾಗಲಿ:


ಬಹು ವಾರ್ಷಿಕ ಬೆಳೆ ನಿಂಬೆ ಬೆಳೆಯಲು ರೈತರು ಹರಸಾಹಸ ಪಡುತ್ತಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸಿ ರೈತರು ನಿಂಬೆ ಬೆಳೆ ಉಳಿಸಿಕೊಳ್ಳಲು ಕೆರೆಗಳ ಮೂಲಕ ನೀರು ಹರಿಸುತ್ತಿದ್ದಾರೆ. ಸರ್ವ ಕಾಲದಲ್ಲಿಯೂ ನೀರು ಪೂರೈಸಲು ಇನ್ನಷ್ಟು ನೀರಾವರಿ ಯೋಜನೆಗಳನ್ನು ಘೋಷಿಸಿ ಲಿಂಬೆ ಬೆಳೆಗೆ ಉತ್ತೇಜಿಸುವ ವಿಶೇಷ ಪ್ಯಾಕೇಜ್‌ಗಳ ಜಾರಿಯಾಗಬೇಕು, ನಿಂಬೆ ಬೆಳೆಗಾರರಿಗೆ ಹೆಚ್ಚು ಅನುಕೂಲವಾಗಬೇಕು. ಇಂಡಿ ನಿಂಬೆ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಬೇಕೆಂಬ ಚಿಂತನೆಯಿಂದ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ, ನಿಂಬೆಗೆ ಜಿಐ ಟ್ಯಾಗ್ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇಂದು ಇಂಡಿ ನಿಂಬೆ ವಿದೇಶಗಳಿಗೆ ರಫ್ತಾಗುತ್ತಿದೆ. ಈ ಕುರಿತು ಪ್ರಧಾನ ಮಂತ್ರಿ ಶ್ಲಾಘನೀಯ ಮಾತು ಹೇಳಿದ್ದು ಸಂತಸದ ಸಂಗತಿ. ಇದು ನಿಂಬೆ ಬೆಳೆಗಾರರಿಗೆ ಮತ್ತಷ್ಟು ಸ್ಫೂರ್ತಿ ದೊರೆತಂತಾಗಿದೆ. ಬಜೆಟ್‌ನಲ್ಲಿ ವಿಶೇಷ ಯೋಜನೆ, ಪ್ರೋತ್ಸಾಹಿಸುವ ಪೂರಕ ಪ್ಯಾಕೇಜ್‌ ನಿರೀಕ್ಷೆಯಲ್ಲಿದ್ದೇನೆ.

-ಯಶವಂತರಾಯಗೌಡ ಪಾಟೀಲ,
ಶಾಸಕರು,ಇಂಡಿ.