ಸಾರಾಂಶ
ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾ.ಪಂ.ನ ತೊಂಬಟ್ಟು ಮೂಲದ ಮಹಿಳೆ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದಲ್ಲಿ ಸಕ್ರಿಯರಾಗಿದ್ದ ನಕ್ಸಲೀಯರಲ್ಲಿ ಕೊನೆಯವರಾದ ರವೀಂದ್ರ ಶನಿವಾರ ಚಿಕ್ಕಮಗಳೂರು ಪೊಲೀಸ್ ಮುಂದೆ ಶರಣಾಗಿದ್ದು, ರಾಜ್ಯದಲ್ಲಿ ನಕ್ಸಲ್ ಚಳುವಳಿ ಕೊನೆಗೊಂಡಿದೆ. ಇದೀಗ ಆಂಧ್ರಪ್ರದೇಶದಲ್ಲಿ ಈ ಹಿಂದೆ ಶರಣಾಗಿದ್ದ ಕರ್ನಾಟಕದ ನಕ್ಸಲ್ ಲಕ್ಷ್ಮೀ ತೊಂಬಟ್ಟು (41) ಭಾನುವಾರ ಉಡುಪಿಯ ಪೊಲೀಸ್ ಮುಂದೆ ಶರಣಾಗುತ್ತಾಳೆ ಎಂಬ ಮಾಹಿತಿ ಇದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಪಂನ ತೊಂಬಟ್ಟು ಎಂಬಲ್ಲಿನ ನಿವಾಸಿಯಾಗಿದ್ದ ಲಕ್ಷ್ಮೀ ತಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಾ ನಕ್ಸಲ್ ಚಳವಳಿ ಸೇರಿದ್ದಳು. ಪಂಜು ಪೂಜಾರಿ-ಅಬ್ಬಕ್ಕ ಪೂಜಾರಿ ದಂಪತಿಯ 6 ಮಕ್ಕಳ ಪೈಕಿ 5ನೆಯವರಾದ ಲಕ್ಷ್ಮೀ 2006ರ ಮಾ.6ರಂದು ಕಾಣೆಯಾಗಿದ್ದಳು. ಬಳಿಕ ಲಕ್ಷ್ಮೀ 2007ರಲ್ಲಿ ಇಲ್ಲಿನ ಮಚ್ಚಟ್ಟು ಗ್ರಾಮದಲ್ಲಿ ಕಾಣಿಸಿಕೊಂಡು ತಾನು ನಕ್ಸಲ್ ಚಳವಳಿ ಸೇರಿದ್ದನ್ನು ಬಹಿರಂಗಪಡಿಸಿದ್ದಳು.ತನ್ನೂರಿನ ತೀರಾ ಹದಗೆಟ್ಟಿದ್ದ ರಸ್ತೆ, ಊರಲ್ಲಿ ಅಕ್ರಮವಾಗಿ ತಲೆ ಎತ್ತಿ ಸ್ಥಳೀಯರ ಪಾಲಿಗೆ ಸಾಪವಾಗಿದ್ದ ಸರಾಯಿ ಅಂಗಡಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಲಕ್ಷ್ಮೀ, ಶಾಂತಿಯುತ ಹೋರಾಟ ಫಲ ನೀಡದಿದ್ದಾಗ ಕ್ರಾಂತಿಯತ ಹೋರಾಟಕ್ಕೆ ಕೈಜೋಡಿಸಿದ್ದಳು.
ನಂತರ ನಕ್ಸಲ್ ಸಂಜೀವ ಎಂಬರನ್ನು ಮದುವೆಯಾಗಿ, 2009ರಲ್ಲಿ ಪತಿಯ ಜೊತೆ ಆಂಧ್ರದಲ್ಲಿ ಶರಣಾಗಿ ಇದೀಗ ಅಲ್ಲಿಯೇ ಸಂಸಾರ ಸಾಗಿಸುತ್ತಿದ್ದಾರೆ. ಆದರೆ ಆಕೆಯ ಮೇಲೆ ರಾಜ್ಯದಲ್ಲಿ 3 ಪ್ರಕರಣಗಳಿದ್ದು, ಇಲ್ಲಿ ಇನ್ನೂ ಆಕೆ ಘೋಷಿತ ನಕ್ಸಲೈಟ್ ಆಗಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆ ಕರ್ನಾಟಕಕ್ಕೆ ಬಂದು ಉಡುಪಿ ಜಿಲ್ಲಾಡಳಿತದ ಮುಂದೆ ಶರಣಾಗಿ ಪೊಲೀಸ್ ಪ್ರಕರಣಗಳನ್ನು ಎದುರಿಸಲು ಸಿದ್ದಳಾಗಿದ್ದಾಳೆ ಎಂದು ತಿಳಿದು ಬಂದಿದೆ.ಆದರೆ, ಜಿಲ್ಲಾಧಿಕಾರಿ ಇದನ್ನು ಖಚಿತಪಡಿಸಿಲ್ಲ, ಚಿಕ್ಕಮಗಳೂರಿನಲ್ಲಿ ಒಬ್ಬ ನಕ್ಸಲ್ ಶರಣಾದ ಮಾಹಿತಿ ಇದೆ. ಆದರೆ ನಕ್ಸಲ್ ಲಕ್ಷ್ಮೀ ಶರಣಾಗತಿ ಬಗ್ಗೆ ನಮಗೆ ರಾಜ್ಯ ಸಮಿತಿಯಿಂದ ಮಾಹಿತಿ ಇಲ್ಲ. ಶರಣಾದರೆ ಸಂಬಂಧಿತ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು, ಶಿಷ್ಟಾಚಾರಗಳನ್ನು ನಡಸಲಾಗುತ್ತದೆ ಎಂದಿದ್ದಾರೆ.