ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬೆಳಗಾವಿ ರಾಜಕಾರಣ ಬಾಗಲಕೋಟೆಗೆ ನುಗ್ಗಾಕ್ ಬಿಡುವುದಿಲ್ಲ ಅನ್ನೋ ಕಾರಣಕ್ಕೆ ರಮೇಶ ಕತ್ತಿ ಬಾಗಲಕೋಟೆಗೆ ಬಂದಿದ್ದಾನೆ. ಬೆಳಗಾವಿ ರಾಜಕಾರಣದ ಗುಂಡಾಗಿರಿ ದರೋಡೆಕೋರತನ ತೆಗೆದು ಹಾಕಬೇಕು. ಬೇರು ಸುಮೇತ ಕಿತ್ತಾಕಬೇಕು ಎನ್ನುವ ಕಾರಣಕ್ಕೆ ರಮೇಶ ಕತ್ತಿ ಇಲ್ಲಿಗೆ ಬಂದಿದ್ದಾನೆ ಎಂದು ಪರೋಕ್ಷವಾಗಿ ಸಚಿವ ಸತೀಶ ಜಾರಕಿಹೊಳಿಗೆ ಮಾಜಿ ಸಂಸದ ರಮೇಶ ಕತ್ತಿ ಟಾಂಗ್ ನೀಡಿದರು.ಬಾಗಲಕೋಟೆಯಲ್ಲಿ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಸಮಯ ಇರೂವರೆಗೂ ಕೂಡ ನಮ್ಮ ಹಿರಿಯರು ಹೇಳಿದಂತೆ ಮನೆ ಮನೆ ಪ್ರಚಾರ, ಪಾದಯಾತ್ರೆ ಮಾಡಿ ಹೋಗುತ್ತೇವೆ. ಬೆಳಗಾವಿಂದ ಬಂದವರು ರಾಜಕಾರಣ ಮಾಡುತ್ತಾರೆ, ದರೋಡೆಕೋರ ರಾಜಕಾರಣ ಮಾಡುತ್ತಾರೆ. ಅವರು ಬೆಳಗಾವಿಯಲ್ಲಿ ಮಾಡಿ ಮೂಲೆಗುಂಪಾಗಿ ಇಲ್ಲಿಗೆ ಬಂದಿದ್ದಾರೆ. ಇಲ್ಲೇನೋ ಅವರು ಚುನಾವಣೆ ಮಾಡಲು ಬಂದಿಲ್ಲ, ಇಲ್ಲಿ ಕಂಬಳಿ ಹಾರಿಸುತ್ತಿದ್ದಾರೆ ಎಂದು ಹೇಳಿದರು.ಮೇಟಿ ಅವರು ಆರಿಸಿ ಬರೋದಿಲ್ಲ, ಎರಡು ವರ್ಷದ ನಂತರ ಬರುವ ಎಲೆಕ್ಷನ್ನಲ್ಲಿ ಅವರ ಪೈಕಿ ಒಬ್ಬರನ್ನು ಯಾರನ್ನಾದರೂ ಇಲ್ಲಿ ಹಾಕ್ತಾರೆ, ಇಲ್ಲಿರೋ ಜನರ ನಾಡಿಮಿಡಿತ ಅರಿತುಕೊಳ್ಳೋಕೆ ಬಂದಿದ್ದಾರೆ, ಇಲ್ಲಿಯ ಜನ ಹಣಕ್ಕೆ ಬಗ್ಗುತ್ತಾರೋ, ಖಂಡಕ್ಕೆ ಬಗ್ಗುತ್ತಾರೋ, ದಬ್ಬಾಳಿಕೆ ದರೋಡೆತನಕ್ಕೆ ಬಗ್ತಾರೋ ಅಥವಾ ಹೊಲ ಮನೆ ಬರೆದುಕೊಂಡರೆ ಬಗ್ಗುತ್ತಾರೋ, ಅವನ್ನೆಲ್ಲ ವಿಚಾರ ಮಾಡಿಕೊಂಡೇ ಇಲ್ಲಿಗೆ ಬಂದದಿದ್ದಾರೆ. ಮೇಟಿಯವರನ್ನ ಗೆಲ್ಲಿಸಬೇಕು ಎಂದು ಅವರು ಬಂದಿಲ್ಲ, ಅವರಲ್ಲಿ ಯಾರಾದರೂ ನಿಲ್ಲಬೇಕು ಅನ್ನೋ ಕಾರಣಕ್ಕೆ ಇಲ್ಲಿಗೆ ಬಂದಿದ್ದಾರೆ ಎಂದು ರಮೇಶ ಕತ್ತಿ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮತ ಹಾಕಿದ್ರೆ ವಿದ್ಯಾರ್ಥಿಗಳ ಅರೆಸ್ಟ್ ಮಾಡ್ತೀವಿ ಅಂದ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ರಮೇಶ ಕತ್ತಿ, ಇಂತಹ ದಂಗೆಗಳನ್ನು ಗಲಾಟೆಗಳನ್ನು ಮಾಡಿಸುವುದರಲ್ಲಿ ಅವರು ಎತ್ತದ ಕೈ, ಅವರು ಆ ರೀತಿ ಹೇಳಿಕೆ ಕೊಡುವುದರ ಮೂಲಕ ಎಲ್ಲ ಸಮಾಜದಲ್ಲಿ ಹಾಗೂ ಯುವ ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಗೊಂದಲ ಮೂಡಿಸುತ್ತಿದ್ದಾರೆ. ಇದು ಅವರ ಮನಸ್ಥಿತಿ ತಿಳಿಸುತ್ತದೆ.ಇಲ್ಲಿವರೆಗೆ ನಾವ್ ಬಂದಿದ್ದೇವೆ, ಅದನ್ನೆಲ್ಲ ನೋಡಾಕ್ ಹಿಂದೆ ನಾವಿದ್ದೇವೆ, ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ, ಈಗಿನ ಬಾಗಲಕೋಟೆ ಮುಂದಿನ ಬಾಗಲಕೋಟೆ ಶಾಂತವಾಗಿತ್ತು, ನಮ್ಮ ಮನೆ ನಮ್ಮ ಜಿಲ್ಲೆಯ ಜನ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಜಿಲ್ಲೆಯ ಜನ ನಿರ್ಧಾರ ಮಾಡಿ ಬಿಜೆಪಿ ಗೆಲ್ಲಸುತ್ತಾರೆ ಎಂದು ಹೇಳಿದರು.