ಬಂಟ್ವಾಳ: ಜಿಲ್ಲೆಯ ಹಿಂದಿನ ಜನಪ್ರತಿನಿಧಿಗಳಂತೆ ನಾನೂ‌ ಕಾರ್ಯ ನಿರ್ವಹಿಸಿ ಜಿಲ್ಲೆಗೆ ಗೌರವ ತರುವ ಕೆಲಸ‌ ಮಾಡುತ್ತೇನೆ. ಎಲ್ಲರ ಆಶೀರ್ವಾದ ನನಗೆ ಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಬಿ.ಸಿ‌. ರೋಡ್‌ನಲ್ಲಿರುವ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭಾನುವಾರ ಸಂಜೆ ಭೇಟಿ‌ ನೀಡಿದ ಸಂದರ್ಭ ‘ಕನ್ನಡಪ್ರಭ’ ಜೊತೆ ಅವರು ಮಾತನಾಡಿದರು.

ಜನಾರ್ದನ ಪೂಜಾರಿ ಅವರು ನನ್ನ‌ನ್ನು ರಾಜಕೀಯ ಕ್ಷೇತ್ರದಲ್ಲಿ ಬೆಳೆಸಿದ‌ ರಾಜಕೀಯ ಗುರುಗಳು, ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಈ ಕ್ಷಣದಲ್ಲಿ ಇಂದು ಸರ್ವಧರ್ಮದ ಕ್ಷೇತ್ರಗಳಿಗೆ ಭೇಟಿ ನೀಡಿ, ಅವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಜನಾರ್ದನ‌ ಪೂಜಾರಿಯವರು ಕಾಲೇಜು ದಿನಗಳಿಂದಲೇ ನನ್ನ ತಂದೆಯಷ್ಟೇ ನನಗೆ ರಾಜಕೀಯ ಮಾರ್ಗದರ್ಶನ‌ ನೀಡಿ, ತಪ್ಪು ಮಾಡಿದಾಗ ತಿದ್ದಿ, ಉತ್ತಮ‌ ಕೆಲಸಗಳಿಗೆ ಪ್ರೇರಣೆ ನೀಡಿದವರು.‌ ಅವರನ್ನು ನಾನೆಂದೂ ಮರೆಯುವುದಿಲ್ಲ ಎಂದರು.ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಜೀವಾಳ. ಅವರನ್ನು ಎಂದಿಗೂ ಕಾಯಿಸಬೇಡಿ. ಅವರನ್ನು ಎಂದಿಗೂ ಮರೆಯಬೇಡಿ. ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಪೂಜಾರಿಯವರು ಖಾದರ್ ಅವರನ್ನು ಆಶೀರ್ವದಿಸಿದರು.

ಈ ಸಂದರ್ಭ ದೀಪಕ್ ಪೂಜಾರಿ, ಪಕ್ಷದ‌ ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಭರತ್ ಮುಂಡೋಡಿ, ಡಾ. ರಾಜಾರಾಮ್, ಅಬ್ಬಾಸ್ ಅಲಿ, ಚಂದ್ರಶೇಖರ ಭಂಡಾರಿ, ಅಪ್ಪಿ, ಜೋಸ್ಮಿನ್, ಶೈಲಜಾ ರಾಜೇಶ್, ರಮ್ಲಾನ್ ಪುದು, ಯು.ಟಿ. ಫರೀದ್, ಉಮ್ಮರ್ ಫಾರೂಕ್, ಬಾಲಕೃಷ್ಣ ಅಂಚನ್, ಸಂಜೀವ ಪೂಜಾರಿ, ರಮೇಶ್ ಬೋಳಿಯಾರ್, ಪಿಯೂಸ್ ರೋಡ್ರಿಗಸ್, ರಿಝ್ವಾನ್, ಪದ್ಮನಾಭ ರೈ, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಸದಾಶಿವ ಉಳ್ಳಾಲ್, ರಝಾಕ್‌ ಕುಕ್ಕಾಜೆ, ಅಬ್ದುಲ್ ಎ.ಬಿ., ರಾಜಶೇಖರ ಶೆಟ್ಟಿ, ಸುರೇಶ್ ನಾವೂರು, ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.