ದಲಿತರ ಪ್ರಗತಿ ಮೋದಿ ನೇತೃತ್ವದ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ. ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು

ಕನ್ನಡಪ್ರಭ ವಾರ್ತೆ ಪಾವಗಡ

ದಲಿತರ ಪ್ರಗತಿ ಮೋದಿ ನೇತೃತ್ವದ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ. ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು.

ಪಟ್ಟಣದ ಎಸ್‌ಎಸ್‌ಕೆ ಬಯಲುರಂಗಮಂದಿರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಎಸ್‌ಸಿ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಮಾದಿಗ ಸಮಾಜದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇಶಾದ್ಯಂತ ಮಾದಿಗ ಸಮಾಜ ಪ್ರಗತಿ ಕಾಣಬೇಕು. ಶೈಕ್ಷಣಿಕ ಸಾಮಾಜಿಕ ಹಾಗೂ ಅರ್ಥಿಕ ಪ್ರಗತಿಗಾಗಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಎಸ್‌ಸಿ ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಆಗಬೇಕು. ಮೋದಿ ಪ್ರಧಾನಿಯಾದ ಬಳಿಕ ಮೀಸಲಾತಿ ವರ್ಗೀಕರಣ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ ಎಂದರು.

ದಲಿತ ಹಾಗೂ ಎಲ್ಲ ವರ್ಗದ ಜನತೆಗೆ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದೆ. ನಾನು ರಾಜಕೀಯದಿಂದ ದೂರವಿದ್ದು, ಎಂಎಲ್‌ಎ ಹಾಗೂ ಎಂಎಲ್‌ಸಿಯಂತಹ ಆಶ್ವಾಸನೆ ತಿರಸ್ಕರಿಸಿದ್ದೇನೆ. ನನಗೆ ಅಧಿಕಾರಕ್ಕಿಂತ ಸಮಾಜ ಮುಖ್ಯ ಎಂದು ಹೇಳಿದರು.

ಕಳೆದ 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಕೇಂದ್ರ ಹಾಗೂ ರಾಜ್ಯದಲ್ಲಿ ಮಾದಿಗ ಸಮಾಜಕ್ಕೆ ಆದ್ಯತೆ ನೀಡಲಿಲ್ಲ. ಕಡಿಮೆ ಸಂಖ್ಯೆಯಲಿರುವ ಛಲವಾದಿ ಸಮಾಜಕ್ಕೆ ಆದ್ಯತೆ ನೀಡಿದ್ದಾರೆ. ಖರ್ಗೆ ಎಐಸಿಸಿ ಅಧ್ಯಕ್ಷ ಪ್ರಧಾನಿ ಆಕಾಂಕ್ಷಿಯಾಗಿದ್ದಾರೆ. ರಾಜ್ಯದಲ್ಲಿ ಡಾ.ಜಿ ಪರಮೇಶ್ವರ್‌ ಡಿಸಿಎಂ ಆಗಬಹುದು. ಆದರೆ ಮಾದಿಗ ಸಮಾಜದಲ್ಲಿ ಯಾರು ಕಾಣುತ್ತಿಲ್ಲ. ಇಂತಹ ಪಕ್ಷ ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ದಲಿತರ ಪ್ರಗತಿ ಹಿನ್ನಲೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಹಿರಿಯ ಮುಖಂಡ ಎನ್‌.ತಿಮ್ಮಾರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಬಿಜೆಪಿ ತಾ,ಅಧ್ಯಕ್ಷ ರಂಗಣ್ಣ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಸೊಗಡು ವೆಂಕಟೇಶ್‌, ಬಿಜೆಪಿ ಪರ ಮತಯಾಚಿಸಿದರು.

ವಕೀಲ ಪಾವಗಡ ಶ್ರೀರಾಮ್‌, ತಾ,ಜೆಡಿಎಸ್‌ ಹಿರಿಯ ಮುಖಂಡರಾದ ಬಲರಾಮರೆಡ್ಡಿ, ವಕ್ತಾರ ಅಕ್ಕಲಪ್ಪ ನಾಯ್ಡ್‌ , ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ, ತಾ,ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಸಾಯಿ ಸುಮಾನ್‌ ಹನುಮಂತರಾಯಪ್ಪ, ಮುಖಂಡ ಗೋವಿಂದಬಾಬು, ಕೆ.ವಿ.ಗಿರಿರಾಜ್‌,ರಾಜ್‌ಗೋಪಾಲ್‌, ಬಿಜೆಪಿಯ ಸೂರ್ಯನಾರಾಯಣ್‌, ಮಹಲಿಂಗಪ್ಪ ಮಾದಿಗ ದಂಡೋರದ ವಕೀಲ ಶ್ರೀರಾಮ್‌, ಶಿವಕುಮಾರ್‌ ಸಾಕೇಲ್‌ ಮಾಜಿ ಜಿಪಂ ಅಧ್ಯಕ್ಷ ನರಸಿಂಹಪ್ಪ, ಜಿ.ಟಿ.ಗಿರೀಶ್‌, ಬಲರಾಮರೆಡ್ಡಿ, ಕೆ.ವಿ.ಗಿರಿರಾಜ್‌, ಬಿ.ಪಿ.ಪೆದ್ದನ್ನ, ರಾಜ್‌ಗೋಪಾಲ್‌ , ಮುಖಂಡರಾದ ಮಂಗಳವಾಡ ಮಂಜುನಾಥ್‌,ಕೃಷ್ಣಪುರ ರಾಮಕೃಷ್ಣ ದೇವಲಕೆರೆ ಲಿಂಗಣ್ಣ,ಮಾದಿಗ ದಂಡೋರ ಹನುಮಂತರಾಯಪ್ಪ, ಬಿಜೆಪಿಯ ಪ್ರಸಾದ್‌ಬಾಬು ಇದ್ದರು.