ಸಾರಾಂಶ
ಚಿಕ್ಕಬಳ್ಳಾಪುರ : ನಿನ್ನೆ ಸಂಜೆ ಹಾಗೂ ರಾತ್ರಿಯಿಡೀ ಬಿದ್ದ ಮಳೆ, ಗಾಳಿಗೆ ಬೃಹದಾಕಾರದ ಮರ, ರೆಂಬೆ, ಕೊಂಬೆ ನೆಲಕ್ಕೆ ಉರುಳಿ ಅಪಾಯ, ಮನೆಗಳಿಗೂ ಮಳೆ ನೀರು ನುಗ್ಗಿ, ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಗಳು ಶೀತಲಾವಸ್ಥೆ ತಲುಪಿದ ಹಳೆ ಮನೆ ಗೋಡೆಗಳು ನೆಲಕ್ಕೆ ಉರುಳಿದೆ. ನಗರದ ನ್ಯಾಯಾಲಯ ಮುಂಭಾಗದಲ್ಲಿ ಒಣಗಿದ ಬೃಹದಾಕಾರದ ಮರದ ದಿಮ್ಮೆ ನೆಲಕ್ಕುರುಳಿದ ಘಟನೆ ಬೆಳಗಿನ ಜಾವ ಸುಮಾರು ನಾಲ್ಕುವರೆ ಸಮಯದಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದಲೂ ಜಿಲ್ಲಾ ನ್ಯಾಯಾಲಯ ಮುಂಭಾಗದಲ್ಲಿ ಬೃಹದಾಕಾರ ಮರದ ಬುಡವೊಂದನ್ನೂ ತೆರವುಗೊಳಿಸದೇ ಹಾಗೇ ಬಿಡಲಾಗಿತ್ತು, ಈ ಮರದ ಬೃಹತ್ ಕೊಂಬೆಗಳು ಮಳೆ ಗಾಳಿ ಬಿಸಿಲಿಗೆ ಒಣಗಿ ತೀರ ಕೊಳೆಯುವ ಹಂತದಲ್ಲಿತ್ತು.
ರಾತ್ರಿಯಿಡೀ ಸುರಿದ ಮಳೆಗೆ ಮೊದಲೆ ಶಿಥಿಲಾವಸ್ಥೆ ಸೇರಿದ್ದ ಮರದ ಕೊಂಬೆಗಳು ಮತ್ತು ಮರದ ಬುಡದ ದಿಮ್ಮೆಯು ನೆಲಕ್ಕೆ ಉರುಳಿದೆ. ಮಳೆ ಬರುತ್ತಿದ್ದ ಕಾರಣ ಅದೃಷ್ಟವಶಾತ್ ರಸ್ತೆಯಲ್ಲಿ ಯಾರು ಒಡಾಡದ ಕಾರಣ ಅನಾಹುತ ತಪ್ಪಿದೆ. ಆದರೂ ಮರದ ಸನಿಹ ನಿಲ್ಲಿಸಿದ್ದ ಆಟೋವೊಂದರ ಮೇಲೆ ಮರದ ದಿಮ್ಮೆಯ ಕೊನೆ ಭಾಗ ಬಿದ್ದು ಆಟೋ ಮುಂಭಾಗವು ಜಖಂಗೊಂಡಿದೆ.
ಅಲ್ಲಿಯೇ ಸನಿಹದಲ್ಲಿ ಇದ್ದ ಆಟೋ ಚಾಲಕನಿಗೂ ತಲೆಗೆ ಮರದ ದಿಮ್ಮೆ ತಗುಲಿ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿದೆ ಕೂಡಲೇ ಆಸ್ಪತ್ರೆಗೆ ತೆರಳಿ ಚಾಲಕ ಚಿಕಿತ್ಸೆ ಪಡೆದಿದ್ದಾರೆ. ಮರದ ಕೆಳಗೆ ಪುಸ್ತಕ ಮತ್ತು ದಿನ ಪತ್ರಿಕೆ ಮಾರಾಟ ಮಳಿಗೆ ಇಡುತ್ತಿದ್ದ ವ್ಯಾಪಾರಿ ಹಾಕಿದ್ದ ಮೇಲು ಹೊದಿಕೆಯೂ ಸಹಾ ಹಾಳಾಗಿದೆ.
ನದಿಯಂತಾದ ರಸ್ತೆಗಳು:
ಚಿಕ್ಕಬಳ್ಳಾಪುರ ನಗರದಲ್ಲಿ ಜೋರು ಮಳೆಯಾದ ಹಿನ್ನೆಲೆಯಲ್ಲಿ ಚರಂಡಿ, ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ರಸ್ತೆಯ ಮೇಲೆಯೇ ಹರಿದು ಸಮಸ್ಯೆ ಸೃಷ್ಟಿಸಿದೆ.
ಮಳೆಗೆ ಚದುರಿದ ಕಸ:
ನಗರಸಭೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಕಾರಣ, ಚರಂಡಿ ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸಿದ ಕಾರಣ ರಸ್ತೆ ಬದಿಗಳಲ್ಲಿ ಸುರಿದಿದ್ದ ಕಸದ ರಾಶಿಗಳು ಮಳೆಯಿಂದಾಗಿ ರಸ್ತೆಯ ಮೇಲೆಯೇ ಚದುರಿದೆ. ಇದೇ ಕಸದ ರಾಶಿಗಳು ಚರಂಡಿ, ಮೋರಿಗಳಿಗೆ ಬ್ಲಾಕ್ ಆಗಿ ರಸ್ತೆ ಮೇಲೆಯೇ ಕಸದ ರಾಶಿಗಳು ಬೀಳುವ ಮೂಲಕ ಸಮಸ್ಯೆ ಉಂಟು ಮಾಡಿದೆ.
ಮುಳುಗಿದ ಅಂಡರ್ ಪಾಸ್:
ನಗರದಿಂದ ಮಂಚನಬಲೆಗೆ ಹೋಗುವ ರಸ್ತೆಯಲ್ಲಿರುವ ಅಂಡರ್ ಪಾಸ್ ಸಂಪೂರ್ಣವಾಗಿ ಮುಳಗಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳ ಕೊಳ್ಳದಲ್ಲಿ ಕಟ್ಟಿರುವ ಮನೆಗಳಿಗೂ ನೀರು ನುಗ್ಗಿ ಜನರು ತೊಂದರೆಗೆ ಸಿಲುಕುವಂತಾಗಿದೆ.
ದ್ರಾಕ್ಷಿ, ಹೂ ಬೆಳೆಗೆ ಹೊಡೆತ: ಮಳೆಯಿಲ್ಲದೇ ಕಂಗಾಲಾಗಿದ್ದ ರೈತರಿಗೆ ವರುಣಾ ಕೃಪೆ ತೋರಿರುವುದು ರೈತರಲ್ಲಿ ಸಂತಸ ಉಂಟು ಮಾಡಿದೆ. ಜಿಲ್ಲೆಯಲ್ಲಿ ಈಗಷ್ಟೇ ದ್ರಾಕ್ಷಿ ಸುಗ್ಗಿ ಶುರುವಾಗಿದ್ದು, ಹೆಚ್ಚು ಮಳೆಯಾಗಿರುವುದರಿಂದ ದ್ರಾಕ್ಷಿ ಫಸಲು ಹೊಂದಿರುವ ತೋಟಗಳಿಗೆ ಹೆಚ್ಚು ಹಾನಿ ಉಂಟು ಮಾಡಿದೆ. ಅದೇ ರೀತಿ ಕೊಯ್ಲಿಗೆ ಬಂದಿರುವ ದ್ರಾಕ್ಷಿ, ಹೂ ಬೆಳೆಗೂ ನಷ್ಟ ಆಗಿದೆ ಎಂದ ನಗರಸಭೆ ಮಾಜಿ ಅಧ್ಯಕ್ಷ ಆನಂದ ರೆಡ್ಡಿಬಾಬು ತಿಳಿಸಿದ್ದಾರೆ. ಒಟ್ಟಾರೆಯಾಗಿ ರಾತ್ರಿ ಇಡಿ ಚಿಕ್ಕಬಳ್ಳಾಪುರ ನಗರ ಸೇರಿದಂತೆ ತಾಲೂಕಿನಾದ್ಯಂತ ಬಿದ್ದ ಮೊಳಕೆ ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬಗಳು ಶೀತಲಾವಸ್ಥೆ ತಲುಪಿದ ಹಳೆ ಮನೆ ಗೋಡೆಗಳು ನೆಲಕ್ಕೆ ಉರುಳಿದೆ.