ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಒಕ್ಕಲಿಗ ಸಮಾಜದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಪುರಸಭೆ ಸದಸ್ಯ ಎಸ್.ಪ್ರಕಾಶ್ ಒತ್ತಾಯಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರೊರಂದಿಗೆ ಮಾತನಾಡಿದ ಅವರು, ಚಂದ್ರಶೇಖರನಾಥ ಶ್ರೀಗಳು ಬಾಯಿತಪ್ಪಿ ಮಾತನಾಡಿ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಈಗಿದ್ದರೂ ಅವರ ವಿರುದ್ಧ ರಾಜ್ಯ ಸರ್ಕಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವ ಮೂಲಕ ಒಂದು ಸಮಾಜದ ಓಲೈಕೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣಿಗಳು ಸೇರಿದಂತೆ ಹಲವರು ದೊಡ್ಡಮಟ್ಟದಲ್ಲಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ. ಅಂತಹವರ ಮೇಲೆ ಯಾವುದೇ ಪ್ರಕರಣಗಲು ದಾಖಲಾಗಿಲ್ಲ. ಕೇವಲ ಸ್ವಾಮೀಜಿ ಮೇಲೆ ಮಾತ್ರ ಏಕೆ ಎಂದು ಪ್ರಶ್ನಿಸಿದರು.ಸಚಿವ ಜಮೀರ್ ಅಹಮದ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೈ ಬಣ್ಣದ ಬಗ್ಗೆ ಮಾತನಾಡಿದಾಗ ಯಾವುದೇ ಪ್ರಕರಣ ದಾಖಲು ಮಾಡಿಲ್ಲ. ಕನಿಷ್ಠ ಪಕ್ಷ ಅವರಿಗೆ ಎಚ್ಚರಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡದೇ ಶ್ರೀಗಳು ವಿಷಯದಲ್ಲಿ ಏಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಿಡಿಕಾರಿದರು.
ಸ್ವಾಮೀಜಿಯನ್ನು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಸಿಕೊಳ್ಳಬಾರದು. ಒಂದು ವೇಳೆ ವಿನಾ ಕಾರಣ ವಿಚಾರಣೆ ನಡೆಸಿದರೆ ಮುಂದಿನ ಸಭೆಯಲ್ಲಿ ಉಗ್ರ ಹೋರಾಟ ಮಾಡುವ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಇಂದ್ರಕುಮಾರ್, ಮುಖಂಡರಾದ ಸುಧಾಕರ್, ಮಹದೇವಪುರ ಸುರೇಶ್, ನಂದೀಶ್ ಇದ್ದರು.
ದೂರು ಬಂದಿದ್ದರಿಂದ ಎಫ್ಐಆರ್: ಚಲುವರಾಯಸ್ವಾಮಿಕನ್ನಡಪ್ರಭ ವಾರ್ತೆ ಮಂಡ್ಯ
ಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ದೂರು ದಾಖಲಾಗಿದ್ದರಿಂದ ಎಫ್ಐಆರ್ ದಾಖಲಿಸಲಾಗಿದೆಯೇ ವಿನಃ ಉದ್ದೇಶಪೂರ್ವಕವಾಗಿ ದಾಖಲಿಸಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.ಈ ವಿಚಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರ ಗಮನಕ್ಕೂ ಬಂದಿದೆ. ಎಲ್ಲಾ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಫ್ಐಆರ್ ಹಾಕಿದ ಮೇಲೆ ಬಿ-ರಿಪೋರ್ಟ್ ಹಾಕಬಾರದು ಅಂತೇನೂ ಇಲ್ಲ. ಕಂಪ್ಲೆಂಟ್ ಕೊಟ್ಟಿರೋ ಕಾರಣ ಎಫ್ಐಆರ್ ಹಾಕಿದ್ದಾರೆ. ಈಗಾಗಲೇ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಈಗ ಬಿ-ರಿಪೋರ್ಟ್ ಹಾಕಿದ್ರೆ ಸರಿ ಹೋಗುತ್ತೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಕರಿಯ ಎಂದು ಕರೆದಿದ್ದಕ್ಕೆ ಯಾರೂ ದೂರು ಕೊಟ್ಟಿಲ್ಲ. ಹಾಗಾಗಿ ಎಫ್ಐಆರ್ ದಾಖಲಾಗಿಲ್ಲ ಎಂದು ಸಮಜಾಯಿಷಿ ನೀಡಿದರು.