ಹುಬ್ಬಳ್ಳಿ:

ರಾಜ್ಯ ಸರ್ಕಾರ 2025-26ನೇ ಸಾಲಿನ ಪರಿಷ್ಕೃತ ವಿದ್ಯುತ್ ದರವನ್ನು ಏಪ್ರಿಲ್‌ನಿಂದ ಜಾರಿಗೊಳಿಸಿರುವ ಕ್ರಮಕ್ಕೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಈ ಪರಿಷ್ಕರಣೆಯಂತೆ ಎಲ್‌ಟಿ-3 ವಾಣಿಜ್ಯ, ಎಲ್‌ಟಿ-5 ಕೈಗಾರಿಕೆ, ಎಚ್‌ಟಿ-2ಎ ಹಾಗೂ ಎಚ್‌ಟಿ–2ಬಿ ವಾಣಿಜ್ಯ ವರ್ಗಗಳ ವಿದ್ಯುತ್ ದರದಲ್ಲಿ ಗಣನೀಯ ಏರಿಕೆ ಮಾಡಲಾಗಿದೆ. ಯುನಿಟ್‌ಗಿಂತಲೂ ನಿಗದಿತ ಶುಲ್ಕ ಹೆಚ್ಚಳದಿಂದ ಸಣ್ಣ, ಮಧ್ಯಮ ಹಾಗೂ ದೊಡ್ಡ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳು ಹೆಚ್ಚುವರಿ ಆರ್ಥಿಕ ಹೊರೆ ಎದುರಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳಿಗೆ (ಹೆಸ್ಕಾಂ) ಹಿಂದಿನ ಹಣಕಾಸು ವರ್ಷದಲ್ಲಿ ಆದಾಯ ಖೋತಾ ಆಗಿದ್ದು, ವಿದ್ಯುತ್ ದರ ಹೆಚ್ಚಳ ಮೂಲಕ ಈ ಆರ್ಥಿಕ ನಷ್ಟ ಸರಿದೂಗಿಸುವಂತೆ 5 ಎಸ್ಕಾಂಗಳು ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಅಂತಿಮವಾಗಿ ಎಸ್ಕಾಂಗಳ ಒತ್ತಾಯಕ್ಕೆ ಮಣಿದಿರುವ ಕೆಇಆರ್‌ಸಿಯು 2025-26ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿ ಆದೇಶ ಹೊರಡಿಸಿರುವುದು ಕೈಗಾರಿಕೆಗಳಿಗೆ ಬರ ಸಿಡಿಲು ಬಡಿದಂತಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 5 ಎಸ್ಕಾಂಗಳಿಗೆ ಆಗಿರುವ ನಷ್ಟವನ್ನು ವಿದ್ಯುತ್ ದರ ಪರಿಷ್ಕರಣೆ ಮೂಲಕ ನಷ್ಟವನ್ನು ತುಂಬಿಕೊಳ್ಳುವ ಯೋಜನೆಯು ಸಮಂಜಸವಲ್ಲ.

ಈಗಾಗಲೇ ಜಿಎಸ್‌ಟಿ, ಭೂ ಬಾಡಿಗೆ, ಬ್ಯಾಂಕ್ ಬಡ್ಡಿದರ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕಾರ್ಮಿಕ ವೆಚ್ಚ ಹೆಚ್ಚಳ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಾಪಾರೋದ್ಯಮಿಗಳಿಗೆ ವಿದ್ಯುತ್ ದರ ಏರಿಕೆ ಮತ್ತೊಂದು ದೊಡ್ಡ ಹೊರೆ ಆಗಿದೆ. ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಸಣ್ಣ ವ್ಯಾಪಾರಿಗಳು ಇದರ ಪರಿಣಾಮದಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ವಿದ್ಯುತ್ ದರ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗುವುದರಿಂದ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ. ಇದರ ನೇರ ಪರಿಣಾಮ ಸಾಮಾನ್ಯ ಗ್ರಾಹಕರ ಮೇಲಾಗುತ್ತದೆ. ರಾಜ್ಯದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರವು ವಿದ್ಯುತ್ ದರ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು. ವಾಣಿಜ್ಯ ಹಾಗೂ ಕೈಗಾರಿಕಾ ವರ್ಗಗಳಿಗೆ ವಿಶೇಷ ರಿಯಾಯಿತಿ ನೀಡಬೇಕು. ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.