ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಹಾಗೂ ಮಾರ್ಗದರ್ಶನದಲ್ಲಿ ನಡೆದಿರುವ ಪ್ರಾಣಿ ವಿನಿಮಯ ಯೋಜನೆಯಡಿ, ಬಿಹಾರದ ಪಾಟ್ನಾದಲ್ಲಿರುವ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ 8 ತೋಳಗಳು ಹಾಗೂ 4 ಘರಿಯಾಲ್‌ಗಳನ್ನು ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ-ಸಿಂಹ ಧಾಮಕ್ಕೆ ಕರೆತರಲಾಗಿದೆ.

ಶಿವಮೊಗ್ಗ: ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಹಾಗೂ ಮಾರ್ಗದರ್ಶನದಲ್ಲಿ ನಡೆದಿರುವ ಪ್ರಾಣಿ ವಿನಿಮಯ ಯೋಜನೆಯಡಿ, ಬಿಹಾರದ ಪಾಟ್ನಾದಲ್ಲಿರುವ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ 8 ತೋಳಗಳು ಹಾಗೂ 4 ಘರಿಯಾಲ್‌ಗಳನ್ನು ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ-ಸಿಂಹ ಧಾಮಕ್ಕೆ ಕರೆತರಲಾಗಿದೆ. ಪ್ರತಿಯಾಗಿ ಶಿವಮೊಗ್ಗ ಮೃಗಾಲಯದಿಂದ 2 ಗಂಡು ಕಾಡುಕೋಣಗಳನ್ನು ಪಟ್ನಾ ಮೃಗಾಲಯಕ್ಕೆ ರವಾನಿಸಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಂ. ಅಮರಾಕ್ಷರ ಮಾಹಿತಿ ನೀಡಿದ್ದಾರೆ.

ಪಾಟ್ನಾದಿಂದ ಆಗಮಿಸಿದ ತೋಳಗಳ ಪೈಕಿ ಐದು ತೋಳಗಳನ್ನು ಮೂರು ವಾರಗಳ ಕಾಲ ವಿಶೇಷ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ಅವಧಿಯಲ್ಲಿ ಹೊಸ ವಾತಾವರಣ, ಆಹಾರ ಶೈಲಿ ಮತ್ತು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಆರೈಕೆ ಮತ್ತು ತರಬೇತಿ ನೀಡಲಾಗಿತ್ತು.

ಪರೀಕ್ಷೆಯ ಬಳಿಕ ಪ್ರಾಣಿಗಳ ಆರೋಗ್ಯ ಸ್ಥಿತಿ ಸುಸ್ಥಿರವಾಗಿದೆ ಎಂಬುದು ದೃಢಪಟ್ಟಿದ್ದರಿಂದ, ಇದೀಗ ಅವುಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ. ಮೃಗಾಲಯದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪಡೆ ಹೊಸ ವನ್ಯಮೃಗಗಳ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿದೆ.