ಕಮತಗಿ: ಸಮೀಪದ ಹೂವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಮುಳ್ಳೂರ ಗ್ರಾಮದ ಹತ್ತಿರ ಕೆಂಪಿಕೆರೆಯಲ್ಲಿ ಎಂಜಿಎನ್‌ಆರ್‌ಇಜಿಎ ಯೋಜನೆಯಲ್ಲಿ ಹೂಳೆತ್ತುವ ಕೆಲಸದ ಸಂದರ್ಭದಲ್ಲಿ ಹೃದಯಾಘಾತವಾಗಿ ಮಹಿಳೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಹೂವಿನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಮಥಾಳ ಗ್ರಾಮದ ರಿಂದವ್ವ ಹನುಮಪ್ಪ ಬಂಟನೂರ (60) ಎಂಬ ಮಹಿಳೆ ಎಂಜಿಎನ್‌ಆರ್‌ಇಜಿಎ ಯೋಜನೆಯಲ್ಲಿ ಕೆಂಪಿಕೆರೆಯ ಹೂಳೆತ್ತಲು ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಹೃದಯಾಘಾತವಾಗಿದ್ದರಿಂದ ಸ್ಥಳದಲ್ಲಿಯೇ ಕುಸಿದುಬಿದ್ದು ಸಾವಿಗೀಡಾಗಿದ್ದಾಳೆ. ಮೃತರಿಗೆ ಪತಿ, ಓರ್ವ ಪುತ್ರ,ನಾಲ್ವರು ಪುತ್ರಿಯರು ಇದ್ದಾರೆ.ಹುನಗುಂದ ತಾಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ಹೂವಿನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.