ಇದೀಗ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬಳು ಐಸ್ ಕ್ರಿಮ್ ಅಂಗಡಿ ತೆರೆದು ಗಮನ ಸೆಳೆದಿದ್ದಾರೆ.
ಜಿ.ಸೋಮಶೇಖರ
ಕೊಟ್ಟೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಪಕ್ಕದ ಕೂಡ್ಲಿಗಿ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆ ಮನೆ ಕಟ್ಟಿಸಿಕೊಂಡಿದ್ದು ಗಮನ ಸೆಳೆದಿತ್ತು. ಇದೀಗ ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಿಂದ ಮಹಿಳೆಯೊಬ್ಬಳು ಐಸ್ ಕ್ರಿಮ್ ಅಂಗಡಿ ತೆರೆದು ಗಮನ ಸೆಳೆದಿದ್ದಾರೆ.ಹರಾಳು ಗ್ರಾಮದ ಎನ್. ವಿಶಾಲಾಕ್ಷಿ ಗೃಹಲಕ್ಷ್ಮೀ ಯೋಜನೆ ಅಡಿ ಬರುವ ಪ್ರತಿ ತಿಂಗಳ ₹2000ನ್ನು ಬ್ಯಾಂಕ್ ಖಾತೆಯಲ್ಲಿ ಉಳಿಸಿದ್ದರ ಪ್ರತಿಫಲವಾಗಿ ಮತ್ತು ಪತಿ ಎನ್. ಬಸವರಾಜ್ ಅವರ ಸಹಕಾರ ಪಡೆದು ಐಸ್ ಕ್ರಿಮ್ ಅಂಗಡಿ ತೆರೆದಿದ್ದಾಳೆ.
ಬಿರು ಬೇಸಿಗೆಯಲ್ಲಿ ಮಕ್ಕಳು ಸೇರಿದಂತೆ ಬಹುತೇಕರು ಐಸ್ ಕ್ರೀಮ್ ಸೇವಿಸುತ್ತಿದ್ದರು. ಅವರ ಆಸೆಯನ್ನು ಊರಿನಲ್ಲಿಯೇ ಈಡೇರಿಸಲು ವಿಶಾಲಾಕ್ಷಿ ಕೊಟ್ಟೂರಿನ ಹ್ಯಾಂಗ್ಯೋ ಕಂಪನಿ ಕಿಸನ್ ಎಂಟರ್ಪ್ರೈಸೆಸ್ ವಿತರಕರಿಂದ ಐಸ್ ಅಂಗಡಿಗೆ ಬೇಕಾದ ಚಾಕೋಬಾರ್, ಐಸ್ ಕ್ಯಾಂಡಿ ಮತ್ತಿತರ ವಿವಿಧ ಬಗೆಯ ಐಸ್ ಕ್ರೀಮ್ ಗಳನ್ನು ಪಡೆದು ಇದೀಗ ಹಳ್ಳಿಯಲ್ಲಿನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.ಕಳೆದ 2 ವರ್ಷಗಳಿಂದ ಪ್ರತಿ ತಿಂಗಳು ಎಸ್.ಬಿ ಖಾತೆಗೆ ಜಮಾಗೊಳ್ಳುವ ಗೃಹಲಕ್ಷ್ಮೀ ₹2000 ಸಹಾಯಧನವನ್ನು ಒಟ್ಟುಗೂಡಿಸಿ ಪತಿಯ ಸಹಕಾರದೊಂದಿಗೆ ಬದುಕನ್ನು ಮತ್ತಷ್ಟು ಸದೃಢವಾಗಿ ಕಟ್ಟಿಕೊಳ್ಳಲು ಈ ಯೋಜನೆಯ ಹಣವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವತ್ತ ಮುಂದಾಗಿದ್ದಾರೆ.
ಗೃಹಲಕ್ಷ್ಮೀ ಹಣ ಪ್ರತಿ ತಿಂಗಳು ಬರುತ್ತಿರುವ ಕಾರಣದಿಂದಾಗಿ ನನ್ನ ಇಬ್ಬರು ಮಕ್ಕಳನ್ನು ಡಿ.ಫಾರ್ಮ್ ತರಗತಿಗೆ ಪ್ರವೇಶ ಪಡೆಯಲು ಅನುಕೂಲವಾಗಿತ್ತು. ಇದೀಗ ಹರಾಳು ಗ್ರಾಮದಲ್ಲಿ ಐಸ್ ಕ್ರೀಮ್ ಅಂಗಡಿ ತೆರೆಯಲು ಅನುಕೂಲವಾಗಿದೆ. ಇದಕ್ಕಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವೆ ಎನ್ನುತ್ತಾರೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಎನ್.ವಿಶಾಲಾಕ್ಷಿ.