ಸಾರಾಂಶ
ಮನೆಯೊಂದರಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ಕಳ್ಳರ ಗುಂಪೊಂದು ಹೊಂಚುಹಾಕಿ ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾದ ಘಟನೆ ನಗರದ ಗೌತಮಬುದ್ಧ ಕಾಲೊನಿಯಲ್ಲಿ ಗುರುವಾರ ನಡೆದಿದೆ.
ಜಮಖಂಡಿ: ಮನೆಯೊಂದರಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿದ ಕಳ್ಳರ ಗುಂಪೊಂದು ಹೊಂಚುಹಾಕಿ ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾದ ಘಟನೆ ನಗರದ ಗೌತಮಬುದ್ಧ ಕಾಲೊನಿಯಲ್ಲಿ ಗುರುವಾರ ನಡೆದಿದೆ.
ನಗರದ ನಿವಾಸಿ ಪೃಥ್ವಿ ಪ್ರದೀಪ ನವಣಿ ಎಂಬುವರು ಮನೆಯಲ್ಲಿ ಈ ಘಟನೆ ನಡೆದಿದೆ. ಇವರು ಒಂಟಿಯಾಗಿದ್ದಾರೆ ಎಂಬುದನ್ನು ಗಮನಿಸಿದ ದುಷ್ಕರ್ಮಿಗಳು ಮಧ್ಯಾಹ್ನ 12ರ ಸುಮಾರಿಗೆ ಮನೆಗೆ ಬಂದು ಬಾಗಿಲು ಬಾರಿಸಿ ಮಹಿಳೆಯನ್ನು ಹೊರಗೆ ಕರೆದಿದ್ದಾರೆ ಎನ್ನಲಾಗಿದೆ. ಹಿಂದಿ ಭಾಷೆಯಲ್ಲಿ ಮಾತನಾಡುತ್ತ ಮಹಿಳೆಯ ಚಿತ್ತವನ್ನು ಬೇರೆಡೆ ಸೆಳೆದು ಸರ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದ ಮಹಿಳೆ ದಿಟ್ಟತನ ಪ್ರದರ್ಶಿಸಿದ್ದು ಪಕ್ಕದಲ್ಲಿದ್ದ ಕಾಕ್ರೋಚ್ ಹಿಟ್ನ ಬಾಟಲಿಯಿಂದ ಕಳ್ಳರ ಮುಖಕ್ಕೆ ಸ್ಪ್ರೇ ಮಾಡಿದ್ದಾರೆ. ಇದರಿಂದ ವಿಚಲಿತರಾದ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಹಿಳೆಯ ದಿಟ್ಟತನದ ಪ್ರದರ್ಶನದಿಂದ ಸಂಭವಿಸಬಹುದಾಗಿದ್ದ ಕಳ್ಳತನ ವಿಫಲವಾಗಿದೆ. ಘಟನಾ ಸ್ಥಳಕ್ಕೆ ನಗರದ ಪಿಎಸ್ಐ ಅನೀಲ ಕುಂಬಾರ, ಕ್ರೈಂ ವಿಭಾಗದ ಪಿಎಸ್ಐ ಎಚ್.ಎಚ್.ಹೊಸಮನಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.