ಧಾರವಾಡ:
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಕೊಡುಗೆ ಅನನ್ಯ. ಆ ಸಮಯದಲ್ಲಿ ಹೋರಾಟದಲ್ಲಿ ಭಾಗವಹಿಸಿದ ಪುರುಷರು ಕೆಲ ಸಮಯ ಭೂಗತರಾಗಿರುತ್ತಿದ್ದರೂ, ಆಗ ಸಂಸಾರದ ಜವಾಬ್ದಾರಿ ಹೊತ್ತುಕೊಂಡು ಹೋರಾಟದಲ್ಲಿ ಮಹಿಳೆಯರು ಸಹಕರಿಸುತ್ತಿದ್ದರು ಎಂದು ಸಾಮಾಜಿಕ ಕಾರ್ಯಕರ್ತೆ ಶಾರದಾ ದಾಬಡೆ ಹೇಳಿದರು.ಧಾರವಾಡ ಜಾನಪದ ಸಂಶೋಧನ ಕೇಂದ್ರ ಹಮ್ಮಿಕೊಂಡ ಸ್ವಾತಂತ್ರ್ಯ ಹೋರಾಟಗಾರ ರುದ್ರಯ್ಯ ಕಲ್ಮಠ ದತ್ತಿಯಲ್ಲಿ ಮಾತನಾಡಿದ ಅವರು, ಧಾರವಾಡದ ಹಲವಾರು ಮಹಿಳೆಯರ ಕೊಡುಗೆಯನ್ನೂ ನೆನಪಿಸಿಕೊಂಡರು. ಶಕುಂತಲಾ ಕುರ್ತಕೋಟಿ ಹಾಗೂ ಶಕುಂತಲಾ ದಾಬಡೆ ಸ್ವತಃ ಹೋರಾಟದಲ್ಲಿ ಪಾಲ್ಗೊಂಡು ಕಷ್ಟದ ಪರಿಸ್ಥಿತಿ ಎದುರಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡವರು. ಅಂದಿನ ಕಷ್ಟಕರ ದಿನಗಳಲ್ಲಿ ಸಂಸಾರದ ಹೊಣೆಯ ಜತೆಗೆ ಸ್ವಾತಂತ್ರಕ್ಕಾಗಿ ತನು, ಮನ, ಧನದಿಂದ ಸಹಾಯ ಮಾಡಿದ್ದಾರೆ ಎಂದರು.
ಪ್ರಸ್ತುತ ಪರಿಸ್ಥಿತಿ ಭಿನ್ನವಾಗಿದೆ. ದೇಶದ ಸ್ಥಿತಿ ಏನಾಗಿದೆ? ನಿಜವಾಗಿಯೂ ನಾವು ಸ್ವತಂತ್ರರಾಗಿದ್ದೇವೆಯೇ? ಎಂದು ನಾವು ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಅಂದಿಗಿಂತಲೂ ಕೆಟ್ಟದಾದ ಹಾಗೂ ಸಹಿಸಲಾರದ ಸಂದರ್ಭಗಳನ್ನು ಹೆಣ್ಣು ಮಕ್ಕಳು ಎದುರಿಸುತ್ತಿದ್ದಾರೆ. ರಾಜಕೀಯದಲ್ಲಂತೂ ಅವರಿಗೆ ಪ್ರವೇಶ ಪೂರ್ತಿಯಾಗಿ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಮಹಿಳಾ ವಿವಿಯಿಂದ ಗೌರವ ಡಾಕ್ಟರೆಟ್ ಪದವಿ ಪಡೆದ ಪಾರ್ವತೆವ್ವ ಹೊಂಗಲ ಅವರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ್ ಕುಲಕರ್ಣಿ ಮಾತನಾಡಿದರು. 25 ಹೆಚ್ಚು ಮಹಿಳಾ ತಂಡಗಳು ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹುಬ್ಬಳ್ಳಿಯ ಕಲ್ಯಾಣಿ ಮಹಿಳಾ ಮಂಡಳ ಪ್ರಥಮ, ಸರಸ್ವತಿ ಮಹಿಳಾ ಮಂಡಳ ದ್ವಿತೀಯ ಹಾಗೂ ಸ್ವರಸಂಪದ ಭಜನಾ ಮಂಡಳ ತೃತೀಯ ಬಹುಮಾನ ಪಡೆಯಿತು. ತುಂಗಭದ್ರಾ ಮಹಿಳಾ ಮಂಡಳ, ಶ್ರೀರಂಜಿನಿ, ಗಾನ ಸಿಂಚನ, ವಿಶ್ವಜ್ಯೋತಿ ಹಾಗೂ ಬೆಳ್ಳಿ ಬೆಟ್ಟ ಮಹಿಳಾ ಮಂಡಳಗಳು ಸಮಾಧಾನಕರ ಬಹುಮಾನ ಪಡೆದವು. ನಿರ್ಣಾಯಕರಾಗಿ ಡಾ. ಅನಿಲ ಮೇತ್ರಿ, ಖುಷಿ ಢವಳೆ ಹಾಗೂ ನಾಗಭೂಷಣ ಹಿರೇಮಠ ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ವಿಶ್ವೇಶ್ವರಿ ಹಿರೇಮಠ ಮಾತನಾಡಿದರು, ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷ ಗುರು ಕಲ್ಮಠ ಆಶಯ ನುಡಿ ಹೇಳಿದರು. ಆದರ್ಶ ಕಲ್ಮಠ ವಂದಿಸಿದರು, ಸುಜಾತ ಹಡಗಲಿ ನಿರೂಪಿಸಿದರು. ಖೈರುನ್ನಿಸಾ ಸಂಗಡಿಗರು ದೇಶಭಕ್ತಿ ಗೀತೆ ಹಾಡಿದರು.