ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳೆಯರು ಸಿದ್ಧ ಮಾದರಿಯಿಂದ ಹೊರಬನ್ನಿ. ನಿಮ್ಮನ್ನು ನೀವು ಅರಿತು ವೃತ್ತಿಯಲ್ಲಿ ಉನ್ನತ ಸ್ಥಾನ ಅಲಂಕರಿಸಿ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವೆಂಕಟೇಶಕುಮಾರ ಉದ್ಯೋಗಸ್ಥ ಮಹಿಳೆಯರಿಗೆ ಕಿವಿಮಾತು ಹೇಳಿದರು.ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ, ರಾಜ್ಯ ಉನ್ನತ ಶಿಕ್ಷಣ ಪರಿಷತ್, ಮಹಿಳಾ ವಿವಿಯ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಹಿಳೆಯರು ಸಿದ್ಧಮಾದರಿ ಪಾತ್ರಗಳಿಂದ ಹೊರಬರುತ್ತಿದ್ದಾರೆ. ದುಡಿಯುವ ವಲಯಕ್ಕೆ ಹೆಜ್ಜೆ ಇರಿಸಿ ವೃತ್ತಿಪರ ಮಹಿಳೆಯರು ಆಗುತ್ತಿರುವುದು ಸಂತೋಷ. ಆದರೆ ಕೇವಲ ದುಡಿಮೆಯ ವಲಯದಲ್ಲಿ ಗೋಚರಿಸಿದರೆ ಸಾಲದು. ವೃತ್ತಿಯಲ್ಲಿ ಉನ್ನತ ಸ್ಥಾನಗಳನ್ನು ಹೊಂದಬೇಕು. ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಸ್ವಿಚ್ಆನ್, ಸ್ವಿಚ್ಆಫ್ ಪರಿಕಲ್ಪನೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಧಾರವಾಡದ ಕರ್ನಾಟಕ ವಿವಿ ವಿಶ್ರಾಂತ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಅಮ್ಮಿನಬಾವಿ ಮಾತನಾಡಿ, ಕೆಲಸವನ್ನು ಸಂತಸದಿಂದ ಅನುಭವಿಸಿದಾಗ ಒತ್ತಡ ಅನಿಸದು. ವೃತ್ತಿಪರರಾಗಬೇಕಾದರೆ ಮನೆ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ. ಮನಸ್ಸನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಿ. ಆಗ ಮನಸ್ಸು ಚಿಮ್ಮುಹಲಗೆಯಂತೆ ಕೆಲಸ ಮಾಡುತ್ತದೆ ಎಂದು ಭರವಸೆ ತುಂಬಿದರು.ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ.ವೈ ಮಾತನಾಡಿ, ಮಹಿಳೆಯರು ಇಂದು ಯಾವುದೇ ವಲಯಕ್ಕೆ ಪ್ರವೇಶ ಪಡೆಯಬಹುದು. ಆದರೂ, ಸಿದ್ಧಮಾದರಿ ಪಾತ್ರಗಳಿಂದ ಹೊರಬರುವುದು ಅಷ್ಟು ಸುಲಭವಲ್ಲ. ಕುಟುಂಬವೂ ಸಹಕಾರ ನೀಡಬೇಕು. ಕೌಟುಂಬಿಕ ಚೌಕಟ್ಟಿನಿಂದ ಹೊರ ಬಂದು ಕೆಲಸ ಮಾಡುವಾಗ ಕುಟುಂಬ ಮತ್ತು ಸಮಾಜ ಎರಡರಲ್ಲೂ ಸಹಕಾರ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಡಾ.ಭಾಗ್ಯಶ್ರೀ ದೊಡಮನಿ ನಿರೂಪಿಸಿದರು. ಡಾ.ಸರೋಜಾ ಸಂತಿ ಪರಿಚಯಿಸಿದರು. ಡಾ.ರಜಿಯಾ ನದಾಫ್ ವಂದಿಸಿದರು. ಕಾರ್ಯಾಗಾರದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಡಾ.ಶಶಿಕಲಾ ರಾಠೋಡ, ರುಕ್ಷ್ಮಿಣಿ ಅಗಸರ ಮತ್ತು 30ಕ್ಕೂ ಅಧಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.