ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆಧುನಿಕ ಜಗತ್ತಿನಲ್ಲಿ ಮಹಿಳೆಗೆ ಅತ್ಯುನ್ನತ ಸ್ಥಾನಗಳು ದೊರೆಯುತ್ತಿವೆ. ಪುರುಷ ಸಮಾನವಾದ ಸ್ಥಾನಮಾನ ಪಡೆದುಕೊಂಡಿದ್ದಾಳೆ. ಆದರೆ ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ಮಹಿಳೆಯರದ್ದಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್. ಎಚ್. ಶೆಟ್ಟರ ಹೇಳಿದರು.ನಗರದ ಬಿ.ವಿ.ವಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 26ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಕದಳಿ ಶ್ರೀ ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವಿದ್ಯಾರ್ಥಿನಿಯರು ಗುರುಹಿರಿಯರಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಂಡರೆ ಸಂಸ್ಕಾರಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು. ಸಮರ್ಪಣಾ ಮನೋಭಾವದಿಂದ ವಿದ್ಯಾರ್ಥಿ ಜೀವನವನ್ನು ಒಂದು ತಪಸ್ಸಿನ ರೀತಿಯಲ್ಲಿ ಸ್ವೀಕರಿಸಬೇಕೆಂದರು.ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ. ಒಡೆಯರ ಅಧ್ಯಕ್ಷತೆ ಮಾತನಾಡಿ, ಪದವಿ ಹಂತದ ಶಿಕ್ಷಣ ವಿದ್ಯಾರ್ಥಿನಿಯರ ಬದುಕಿನ ನಿರ್ಣಯ ಘಟ್ಟವಾಗಿದೆ. ಇದನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಬೇಕು. ಆಸಕ್ತ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವುದರ ಮೂಲಕ ಆ ಕ್ಷೇತ್ರದಲ್ಲಿ ಸಾಧನೆಗೈದು ಸಮಾಜ ಹಾಗೂ ಪಾಲಕರಿಗೆ ಕೀರ್ತಿ ತರುವುದರ ಜೊತೆಗೆ ಸಂತೋಷದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ರ್ಯಾಂಕ್ ಪಡೆದ ವಿದ್ಯಾರ್ಥಿನಿಯರನ್ನು ಹಾಗೂ ವಿಶ್ವವಿದ್ಯಾನಿಲಯದ ಬ್ಲೂ ಆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪಾರಿತೋಷಕ ವಿತರಿಸಲಾಯಿತು.
ಅನುಷಾ ಸಂಗಡಿಗರಿಂದ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಪಿ.ಕೆ. ಚೌಗುಲಾ ಸ್ವಾಗತಿಸಿದರು. ಎಸ್.ಕೆ. ಹಿರೇಮಠ ಪರಿಚಯಿಸಿದರು. ಪಿ.ಎಂ. ಅರ್ಕಸಾಲಿ ವಾರ್ಷಿಕ ವರದಿ ವಾಚಿಸಿದರು. ಡಾ.ಎಂ.ವ್ಹಿ. ಬಾಜಪ್ಪನವರ ಕ್ರೀಡಾ ವರದಿ ಓದಿದರು. ವಿದ್ಯಾರ್ಥಿ ಪ್ರತಿನಿಧಿ ಪದ್ಮಾ ಗಾಳಿಕಟ್ಟೆ ವಂದಿಸಿದರು. ವಂದನಾ ಸತ್ತಿಗೇರಿ ಹಾಗೂ ವಂದನಾ ಕಡಪಟ್ಟಿ ನಿರೂಪಿಸಿದರು. ಮಹಾವಿದ್ಯಾಲಯದ ಬೊಧಕ-ಬೊಧಕೇತರ ಸಿಬ್ಬಂದಿ ಇದ್ದರು.