ಮಹಿಳೆಯರು ಅಡೆ ತಡೆಗಳ ಮೀರಿ ಚಿಂತಿಸುವುದು ಅಗತ್ಯ: ಡಾ.ಶುಭಾ ಮರವಂತೆ

| Published : Mar 25 2024, 12:55 AM IST

ಮಹಿಳೆಯರು ಅಡೆ ತಡೆಗಳ ಮೀರಿ ಚಿಂತಿಸುವುದು ಅಗತ್ಯ: ಡಾ.ಶುಭಾ ಮರವಂತೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ನಮ್ಮ ಮುಂದೆ ಇರುವುದು ಪ್ರಬುದ್ಧ ಮಹಿಳೆಯ ಚಿಂತನೆಯಾಗಿದೆ. ಮಹಿಳೆಯರು ತಮಗಿರುವ ಅಡೆ ತಡೆಗಳ ಬಗ್ಗೆ ಯೋಚಿಸದೇ ಅವುಗಳ ಮೀರಿ ಚಿಂತಿಸಬೇಕಾಗಿದೆ. ಮಹಿಳೆಯರಿಗೆ ಕೌಟುಂಬಿಕ ವ್ಯಕ್ತಿತ್ವ ಎಷ್ಟು ಮುಖ್ಯವೋ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕತೆಯ ವ್ಯಕ್ತಿತ್ವವು ಅಷ್ಟೇ ಮುಖ್ಯ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹೆಣ್ತನವೇ ಈ ಪ್ರಕೃತಿಯ ಅಂತಿಮ ಸತ್ಯ. ಅದೇ ಈ ಜಗತ್ತನ್ನು ಕಾಪಾಡುವ ಶಕ್ತಿ ಎಂದು ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಹೇಳಿದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿಂದ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ನಮ್ಮ ಮುಂದೆ ಇರುವುದು ಪ್ರಬುದ್ಧ ಮಹಿಳೆಯ ಚಿಂತನೆಯಾಗಿದೆ. ಮಹಿಳೆಯರು ತಮಗಿರುವ ಅಡೆ ತಡೆಗಳ ಬಗ್ಗೆ ಯೋಚಿಸದೇ ಅವುಗಳ ಮೀರಿ ಚಿಂತಿಸಬೇಕಾಗಿದೆ. ಮಹಿಳೆಯರಿಗೆ ಕೌಟುಂಬಿಕ ವ್ಯಕ್ತಿತ್ವ ಎಷ್ಟು ಮುಖ್ಯವೋ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕತೆಯ ವ್ಯಕ್ತಿತ್ವವು ಅಷ್ಟೇ ಮುಖ್ಯ ಎಂದರು.

ಮನೋ ವೈದ್ಯೆ ಡಾ.ಶುಭ್ರತಾ ಕೆ.ಎಸ್. ಮಾತನಾಡಿ, ಮಹಿಳೆಯರು ತಮ್ಮ ಅಸ್ಮಿತೆ ಕಂಡುಕೊಳ್ಳಬೇಕಿದೆ. ತನ್ನ ವ್ಯಕ್ತಿತ್ವಕ್ಕೆ ಒಂದು ಹೆಸರೇ ಇಲ್ಲದಂತೆ ಬದುಕುತ್ತಿರುವ ಅನೇಕ ಮಹಿಳೆಯರು ನಮ್ಮ ಮುಂದಿದ್ದಾರೆ. ಅವರು ತಮ್ಮ ಸ್ವ ಸಾಮಾರ್ಥ್ಯ ತಿಳಿದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ ಮಾತನಾಡಿ, ಇಂದು ಮಹಿಳೆಯರು ಪುರುಷನಷ್ಟೇ ಅಥವಾ ಅದಕ್ಕೂ ಹೆಚ್ಚು ಸಮಾನರಾಗಿದ್ದಾರೆ. ಆದರೂ, ಅನೇಕ ಸಂಕುಲಗಳ ಮಧ್ಯೆ ಬದುಕುತ್ತಿದ್ದಾರೆ. ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ಮಹಿಳಾ ಸಂಘಟನೆ ಮಾಡುತ್ತಿದೆ ಎಂದು ಹೇಳಿದರು.

ವಕೀಲರಾದ ಸರೋಜ ಚಂಗೊಳ್ಳಿ ಮಾತನಾಡಿ, ಕಾನೂನಿನ ಮಾಹಿತಿಯನ್ನು ಮಹಿಳೆಯರು ತಿಳಿದುಕೊಳ್ಳಬೇಕು. ತನ್ನ ಎಲ್ಲಾ ಕೆಲಸಗಳ ನಡುವೆ ಹೆಣ್ಣಿಗೂ ಸ್ವಾತಂತ್ರ್ಯವಿರುತ್ತದೆ. ಮಹಿಳೆಯರ ರಕ್ಷಣೆಗಾಗಿಯೇ ಅನೇಕ ಕಾಯ್ದೆಗಳಿವೆ. ಆದರೆ, ಅವರಿಗೆ ಅರಿವಿನ ಕೊರತೆ ಇದೆ ಎಂದರು.

ಸಂಘದ ಕಾರ್ಯದರ್ಶಿ ಡಾ.ಟಿ.ನೇತ್ರಾವತಿ ಮಾತನಾಡಿ, ಸಹನೆ ಹೆಣ್ಣಿನ ಬಹುದೊಡ್ಡ ಕಾಣಿಕೆ. ಸಮಸ್ಯೆಗಳ ಸವಾಲಾಗಿ ಅವರು ಸ್ವೀಕರಿಸಬೇಕು. ಸಾಧನೆಗೆ ಯಾವ ಬಡತನವೂ ಅಡ್ಡಿಯಾಗುವುದಿಲ್ಲ. ಸಂಘ, ಸಮಾಜ, ಸರ್ಕಾರ ಅವರಲ್ಲಿ ಉತ್ಸಾಹ ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಎಸ್ಐ ಹೇಮಲತಾ, ಮಹಾನಗರ ಪಾಲಿಕೆ ಮಾಜಿ ಮೇಯರ್ ಸುವರ್ಣಾ ಶಂಕರ್, ಮಾಜಿ ಸದಸ್ಯೆ ಸುರೇಖಾ ಮುರಳೀಧರ್, ಸಂಘದ ಪದಾಧಿಕಾರಿಗಳು ಸೇರಿ ಮೊದಲಾದವರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ನೃತ್ಯ, ರಸಪ್ರಶ್ನೆ, ಸಂಗೀತ, ಲಕ್ಕಿಡಿಪ್ ಮುಂತಾದ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ನೀಡಲಾಯಿತು.