ರೋಣ ತಾಲೂಕಿನಾದ್ಯಂತ ನಾಗರ ಪಂಚಮಿಯ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಭಾನುವಾರ ಮಹಿಳೆಯರು ಹಾಗೂ ಮಕ್ಕಳು ಕುಟುಂಬ ಸಮೇತ ನಾಗರ ಕಟ್ಟೆಗಳಿಗೆ ತೆರಳಿ ನಾಗದೇವರಿಗೆ ಹಾಲಿನ ಅಭಿಷೇಕ, ಪೂಜೆ ಸಲ್ಲಿಸಿದರು.
ರೋಣ: ತಾಲೂಕಿನಾದ್ಯಂತ ನಾಗರ ಪಂಚಮಿಯ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಭಾನುವಾರ ಮಹಿಳೆಯರು ಹಾಗೂ ಮಕ್ಕಳು ಕುಟುಂಬ ಸಮೇತ ನಾಗರ ಕಟ್ಟೆಗಳಿಗೆ ತೆರಳಿ ನಾಗದೇವರಿಗೆ ಹಾಲಿನ ಅಭಿಷೇಕ, ಪೂಜೆ ಸಲ್ಲಿಸಿದರು.ಹಬ್ಬದ ಅಂಗವಾಗಿ ಬೆಳಗ್ಗೆಯೇ ಮಹಿಳೆಯರು ಪೂಜಾ ಸಾಮಗ್ರಿಗಳೊಂದಿಗೆ ನಾಗರ ಕಟ್ಟೆಗಳತ್ತ ಹೆಜ್ಜೆ ಹಾಕಿದರು. ಹಾಲು, ಹುರಿದ ಅಳ್ಳು, ಎಳ್ಳು ಉಂಡಿ, ಅಳ್ಳಿಟ್ಟು ಉಂಡೆ, ಉಸುಳಿ (ನೆನೆಸಿದ ಕಡಲೆ), ಕೊಕ್ಕಾಬತ್ತಿ, ಕಾಯಿ, ಕರ್ಪೂರ, ಹೂವು ಹಾಗೂ ಎಳೆ ಸಸಿಗಳಿಂದ ಪೋಣಿಸಿದ ದಾರದ ಮಾಲೆಗಳನ್ನು ಪೂಜೆಗೆ ತಂದಿದ್ದರು.
ಕುಟುಂಬದ ಪ್ರತಿಯೊಬ್ಬರ ಹೆಸರಿನಲ್ಲಿಯೂ ನಾಗದೇವರಿಗೆ ಹಾಲೆರೆದು, ಎಲ್ಲರ ಕ್ಷೇಮಕ್ಕಾಗಿ ಪ್ರಾರ್ಥಿಸಿದರು.ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ನಾಗರ ಕಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಶಿವಪೇಟೆ ಬಡಾವಣೆಯ ರೋಣಮ್ಮದೇವಿ ದೇವಸ್ಥಾನದ ಎದುರಿನ ನಾಗರಕಟ್ಟೆ, ಕೆಇಬಿ ಕಾಲನಿ ಹಾಗೂ ನೀರಾವರಿ ಇಲಾಖೆಯ ಗಣೇಶ ದೇವಸ್ಥಾನದ ನಾಗರಕಟ್ಟೆ, ಬಿ.ಆರ್. ಅಂಬೇಡ್ಕರ್ ನಗರ ಮತ್ತು ವೀರಭದ್ರೇಶ್ವರ ದೇವಸ್ಥಾನದ ನಾಗರಕಟ್ಟೆ, ತಳವಾರ ಓಣಿ, ಜಗ್ಗಲರ ಓಣಿ, ಸಂತೋಜಿಯವರ ಓಣಿ ಹಾಗೂ ಶಿವಾನಂದ ನಗರದ ನಾಗರಕಟ್ಟೆಗಳಲ್ಲಿ ಪೂಜೆ ಸಲ್ಲಿಸಿದರು.
ಗ್ರಾಮೀಣ ಭಾಗದಲ್ಲೂ ಸಂಭ್ರಮ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ರೈತರು, ಮಹಿಳೆಯರು ಮತ್ತು ಮಕ್ಕಳು ಶ್ರದ್ಧಾಭಕ್ತಿಗಳಿಂದ ಪಂಚಮಿ ಹಬ್ಬ ಆಚರಿಸಿದರು.ಹಿರೇಹಾಳ, ಸವಡಿ, ಕೌಜಗೇರಿ, ಮಲ್ಲಾಪುರ, ಅಬ್ಬಿಗೇರಿ, ಹೊಳೆಆಲೂರ, ಬೆನಹಾಳ, ಹುನಗುಂಡಿ, ಹುಲ್ಲೂರ, ಸೋಮನಕಟ್ಟಿ, ಹಿರೇಮಣ್ಣೂರ, ಚಿಕ್ಕಮಣ್ಣೂರ, ಬಾಸಲಾಪುರ, ಮುದೇನಗುಡಿ, ಹೊನ್ನಾಪುರ, ಹೊನ್ನಿಗನೂರ, ತಳ್ಳಿಹಾಳ, ಅರಹುಣಸಿ, ಹೊಸಳಗಳಿ, ಕೌಜಗೇರಿ, ಇಟಗಿ, ಸರ್ಜಾಪುರ, ಮೇಲ್ಮಠ ಯಾ.ಸ. ಹಡಗಲಿ, ಡ.ಸ. ಹಡಗಲಿ, ಹೊಳೆ ಹಡಗಲಿ, ಅಮರಗೋಳ, ಗಾಡಗೋಳಿ, ಮೆಣಸಗಿ, ಮಾಳವಾಡ, ಅಸೂಟಿ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿ ನಾಗದೇವರ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ, ನೈವೇದ್ಯ ಅರ್ಪಿಸಿ, ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.