ಸಾರಾಂಶ
-ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ನೂತನ ಜಿಲ್ಲಾ ಘಟಕದ ಉದ್ಘಾಟನೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ಮಹಿಳೆಯರು ಪ್ರತಿಯೊಂದು ಸಾಮಾಜಿಕ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಹೆಮ್ಮೆಯ ಸಂಗತಿ. ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಇಂದ ಸುನೀತಾ ವಿಲಿಯಮ್ಸ್ವರೆಗೂ ಮಹಿಳೆಯರ ಸಾಧನೆ ಮುಖ್ಯವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಹೇಳಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕ, ನೂತನ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಪರಿಸರ ಜಾಗೃತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ತಾಯಿಯಾಗಿ, ಮಡದಿಯಾಗಿ, ಸಹೋದರಿಯಾಗಿ, ಎಲ್ಲಾ ರೀತಿಯಲ್ಲೂ ಮುನ್ನಡೆ ಹೊಂದಿದ್ದಾಳೆ ಹೆಣ್ಣು ಅಬಲೆ ಅಲ್ಲ, ಸಬಲೆಯಾಗಿದ್ದಾಳೆ ಎಂದರು.
ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇಯಾದ ಸ್ಥಾನ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹೆಣ್ಣು ಸಾಕ್ಷಾತ್ ದೇವರ ರೂಪವಾಗಿದ್ದಾಳೆ. ಹಳ್ಳಿಮನೆಯಲ್ಲಿ ಸೌದೆ ಉರಿಯುವಿಕೆಯಿಂದ ಹಿಡಿದು ಕಚೇರಿಯಲ್ಲಿ ಪೆನ್ನು ಹಿಡಿಯುವಿಕೆ ವರೆಗೂ ಒಂದು ಹೆಜ್ಜೆ ಮುಂದೆ ಇದ್ದಾಳೆ ಎಂದರು. ನಮ್ಮ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆಡಳಿತದಿಂದ ಹೆಣ್ಣುಮಕ್ಕಳಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಶೇ.50% ರಷ್ಟು ಸ್ಥಾನಮಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಣ್ಣುಮಕ್ಕಳು ಮುಂದೆಯೂ ಸಹ ಪುರುಷರಿಗಿಂತ ಉನ್ನತ ಮಟ್ಟವನ್ನು ಹೊಂದಲಿ ಎಂದು ಹೇಳಿದರು.ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಮಾತನಾಡಿ, ನಾಡು ಉಳಿಯುವಿಕೆಗಾಗಿ ಪ್ರತಿಯೊಬ್ಬರೂ ಗಿಡ-ಮರಗಳನ್ನು ಪಾಲನೆ ಪೋಷಣೆ ಮಾಡಬೇಕು. ಪ್ರತಿ ಮನೆ ಮನೆಗೆ, ಸಸಿಗಳನ್ನು ನೆಟ್ಟು ಪರಿಸರ ಬೆಳೆಸುವುದರ ಜೊತೆ ಜೊತೆಗೆ ಮಹಿಳೆಗಳಾದ ನಾವು ನಮ್ಮ ನಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಹೆಣ್ಣುಮಕ್ಕಳು ಪ್ರತಿಯೊಂದು ಕಷ್ಟ ನಿವಾರಣೆಗಾಗಿ ಇಂತಹ ಮುಖ್ಯ ಸಂಘಟನೆಯು ಪ್ರಾರಂಭವಾಗಿರುವುದು ಹೆಮ್ಮೆಯ ವಿಷಯ. ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆಯಲ್ಲಿ ಬೆನ್ನೆಲುಬು ಆಗಿ ಇಂತಹ ಸಂಘಟನೆ ನಿಲ್ಲಬೇಕು. ಅಂದಾಗ ಮಾತ್ರ ಸಂಘನೆಗೆ ಬೆಲೆ ಸಿಕ್ಕಂತಾಗುತ್ತದೆ. ಹೆಣ್ಣಿನ ವಿಷಯದಲ್ಲಿ ಸಂಘಟನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೈಲಜಾ ಸಿ.ವಿ. ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ್, ಉಪ ಪ್ರಾಂಶುಪಾಲೆ ಆರತಿ ಕಡಗಂಚಿ, ಜಿಲ್ಲಾಧ್ಯಕ್ಷೆ ಚಂದ್ರಕಲಾ ಗೂಗಲ್, ಸಂಘದ ಕಾರ್ಯದರ್ಶಿಗಳು, ಸದಸ್ಯರು ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು. ಜ್ಯೋತಿಲತಾ ನಿರೂಪಿಸಿದರು. ಡಾ. ಭಾಗ್ಯವತಿ ಅಮರೇಶ್ವರ ವಂದಿಸಿದರು.
----4ವೈಡಿಆರ್7: ಯಾದಗಿರಿಯ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕ, ನೂತನ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಪರಿಸರ ಜಾಗೃತಿ ಕಾರ್ಯಗಾರ ಜರುಗಿತು.