ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕಾಂಗ್ರೆಸ್ ಸರ್ಕಾರ ಸ್ತ್ರಿಶಕ್ತಿ ಮಹಿಳಾ ಸ್ವಸಹಾಯ ಸಂಘಗಳನ್ನು ಆರಂಭಿಸಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಅನುಕೂಲ ಮಾಡಿತ್ತು, ಅದೇ ಮಾದರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ನಿರ್ವಹಿಸುತ್ತಿದೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕಚೇರಿ ಪಟ್ಟಣದ ಸಿ.ಎಂ. ರಸ್ತೆಯಿಂದ ಶ್ರೀರಾಮ ಬಡಾವಣೆಗೆ ಸ್ಥಳಾಂತರಗೊಂಡಿದ್ದು ನೂತನ ಆಡಳಿತ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಮಹಿಳಾ ಸಂಘಗಳು ಅಸ್ತಿತ್ವಕ್ಕೆ ಬಂದ ನಂತರ ಮಹಿಳೆಯರು ಬ್ಯಾಂಕ್‌ ಖಾತೆಗಳನ್ನು ತೆರೆಯಲು ಆರಂಭಿಸಿದ್ದಾರೆ. ಎಸ್.ಎಂ. ಕೃಷ್ಣ ಸರ್ಕಾರ ಸ್ವ-ಸಹಾಯ ಸಂಘಗಳ ಮಾಡುವ ಮೊದಲು ಬ್ಯಾಂಕ್‌ ಗಳಲ್ಲಿ ಖಾತೆಯನ್ನು ಹೊಂದಿರಲಿಲ್ಲ. ಈಗ ಮಹಿಳೆಯರು ಬ್ಯಾಂಕ್‌ ಗಳಲ್ಲಿ ಆರ್ಥಿಕ ವ್ಯವಹಾರ ಮಾಡುತ್ತಿದ್ದಾರೆ ಎಂದರು.ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರು ಆರ್ಥಿಕ ಚಟುವಟಿಕೆ ನಡೆಸಲು ಕಾರಣ ಆಗಿರುವ ಸಂಸ್ಥೆಯು ಗ್ರಾಮೀಣಾ ಭಾಗದಲ್ಲಿ ಕೆರೆ- ಕಟ್ಟೆ ಪುನಶ್ಚೇತನ ಮಾಡಿ ಹಳ್ಳಿಗಾಡಿನ ಜನ-ಜಾನುವಾರುಗಳಿಗೆ ನೀರಿನ ಸೌಲಭ್ಯ ಒದಗಿಸುವ ಕೆಲಸ ಮಾಡಿರುವುದು ಎಲ್ಲರೂ ಮೆಚ್ಚುವಂತಹ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.ರೈತರು ಕೃಷಿ ಚಟುವಟಿಕೆ ಮಾಡಲು ಬೇಕಾಗುವ ಟ್ರಾಕ್ಟರ್ ಸೇರಿದಂತೆ ಇತರ ಯಂತ್ರ ಉಪಕರಣಗಳನ್ನು ಬಾಡಿಗೆ ನೀಡುತ್ತಿರುವುದು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ನೊಂದವರಿಗೆ ಮಾಸಾಸನ ನೀಡುವ ಮೂಲಕ ಧರ್ಮಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರು ರಾಜ್ಯದ ಜನತೆ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಬಣ್ಣಿಸಿದರು.ಲಾಳಂನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿತಾಯಿ, ಮೈಸೂರು ವಿಭಾಗದ ಯೋಜನಾ ನಿರ್ದೇಶಕ ಯೋಗೇಶ್, ಎಂಐಎಸ್ ಯೋಜನಾಧಿಕಾರಿ ಸತೀಶ್, ತಾಲೂಕು ಯೋಜನಾಧಿಕಾರಿ ಸದಾನಂದ ದೇವಾಡಿಗ ಮಾತನಾಡಿದರು.ಉದ್ಘಾಟನಾ ಸಮಾರಂಭ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಡಿ. ರವಿಶಂಕರ್ ಪಾಲ್ಗೊಂಡು ಶುಭ ಕೋರಿದರು. ಮಧ್ಯವರ್ಜನಾ ಶಿಬಿರದ ಕಾರ್ಯಕರ್ತ ಸಂಪತ್‌ ಕುಮಾರ್, ಮಹದೇವ್, ಯೋಜನಾ ಕಚೇರಿ ಸಿಬ್ಬಂದಿ ಮಹದೇವಸ್ವಾಮಿ, ರಜಿತ್, ಜಗದಾಂಬ, ಪ್ರಿಯಾಂಕ, ರಾಜೇಶ್ ಇದ್ದರು.