ಕನ್ನಡಪ್ರಭ ವಾರ್ತೆ ತುಮಕೂರುಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೊಳಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವನ್ನು ಬೆಂಬಲಿಸಿ, ಮೋದಿಯವರನ್ನು ಅಭಿನಂದಿಸಿ ಮಹಿಳಾ ಶಕ್ತಿ ವೇದಿಕೆ ನೇತೃತ್ವದಲ್ಲಿ ಬುಧವಾರ ಸಂಜೆ ನಗರದಲ್ಲಿ ಮಹಿಳೆಯರು ಬೈಕ್‌ ರ್ಯಾಲಿ ನಡೆಸಿ ಸಂಭ್ರಮಿಸಿದರು.ಎಸ್‌ಐಟಿ ಎದುರು ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಎಲ್ಲಾ ಕ್ಷೇತ್ರದಲ್ಲೂ ಸಮರ್ಥವಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ ಅವರು ರಾಜ್ಯ, ಕೇಂದ್ರದ ಆಡಳಿತ ನಡೆಸುವ ರಾಜಕೀಯ ಸ್ಥಾನಮಾನ ಕಲ್ಪಿಸುವ ಮಹಿಳಾ ಮೀಸಲಾತಿ ಅಧಿನಿಯಮ ಜಾರಿಯಾಗುತ್ತಿರುವುದು ದೇಶದ ಮಹಿಳೆಯರಿಗೆ ಸಲ್ಲುವ ಗೌರವವಾಗಿದೆ. ಲೋಕಸಭೆ, ರಾಜ್ಯ ಶಾಸಕಾಂಗಸಭೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು ಎಂಬ ಬೇಡಿಕೆ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಈಡೇರುತ್ತಿದೆ ಎಂದು ಹೇಳಿದರು. ಮಹಿಳೆಯರಿಗೆ ದೇಶ ಆಳುವ ಅರ್ಹತೆ, ಸಾಮರ್ಥ್ಯವಿದೆ. ಆಡಳಿತದಲ್ಲಿ ಮಹಿಳೆಯರ ಸಹಭಾಗಿತ್ವದ ಅವಶ್ಯಕತೆಯೂ ಇದೆ. ಈ ಹಿಂದೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಪಡಿಸಿದ್ದರು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಬೇಕು ಎಂದು ಪ್ರಧಾನಿ ಮೋದಿಯವರ ಸರ್ಕಾರ ಈ ತಿಂಗಳ ೧೬ರಿಂದ ನಡೆಯುವ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಅಧಿನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ನಿಜವಾದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಶಾಸಕ ಜ್ಯೋತಿಗಣೇಶ್ ಅಭಿಪ್ರಾಯ ವ್ಯಕ್ಯಪಡಿಸಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಬೇಕು ಎಂಬ ಆಶಯ ಪ್ರಧಾನಿ ಮೋದಿಯವರ ಸರ್ಕಾರದ ಮೂಲಕ ಈಡೇರುತ್ತಿದೆ. ಇಂದು ಬೈಕ್‌ ರ್ಯಾಲಿ ನಡೆಸಿ ಮೋದಿವರನ್ನು ಬೆಂಬಲಿಸಿ, ಅಭಿನಂದಿಸುತ್ತೇವೆ ಎಂದು ಹೇಳಿದರು. ಎಪಿಎಂಸಿ ಮಾಜಿ ಅಧ್ಯಕ್ಷೆ ತಾರಾದೇವಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜ್ಯೋತಿ ತಿಪ್ಪೇಸ್ವಾಮಿ, ನಗರ ಉಪಾಧ್ಯಕ್ಷೆ ರೇಖಾ ಶಿವಕುಮಾರ್ ಮಾತನಾಡಿ, ಮಹಿಳಾ ಮೀಸಲಾತಿ ಜಾರಿ ಮೂಲಕ ಪ್ರಧಾನಿ ಮೋದಿಯವರು ಮಹಿಳೆಯರಿಗೆ ರಾಜಕೀಯ ಶಕ್ತಿ, ಸ್ಥಾನಮಾನ ಕಲ್ಪಿಸುವ ಮೂಲಕ ಮಹಿಳೆಯರನ್ನೂ ಗೌರವಿಸುತ್ತಿದ್ದಾರೆ ಎಂದು ಹೇಳಿದರು. ನಗರ ಬಿಜೆಪಿ ಅಧ್ಯಕ್ಷ ಟಿ.ಕೆ. ಧನುಷ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ವಸಂತ ಸುದರ್ಶನ್, ಮುಖಂಡರಾದ ಗಣೇಶ್‌ಪ್ರಸಾದ್, ರಕ್ಷಿತ್, ರಾಧಾ ಗಂಗಾಧರ್, ಅಂಬಿಕಾ, ಮಂಜುಳಾ ಲೋಕೇಶ್, ಲತಾಬಾಬು, ಲೀಲಾವತಿ, ನಾಗರತ್ನ ಮೊದಲಾದವರು ಭಾಗವಹಿಸಿದ್ದರು. ರಾಷ್ಟ್ರ ಧ್ವಜ ಪ್ರದರ್ಶಿಸುತ್ತಾ ಮಹಿಳೆಯರು ಬೈಕ್ ರ್ಯಾಲಿ ನಡೆಸಿದರು. ಎಸ್‌ಐಟಿ ಮುಂಭಾಗದಿಂದ ಹೊರಟರ್ಯಾಲಿ ಗಂಗೋತ್ರಿ ರಸ್ತೆ, ಎಸ್‌ಐಟಿ, ಎಸ್‌ಎಸ್ ಪುರಂ ರಸ್ತೆ, ಭದ್ರಮ್ಮ ವೃತ್ತ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಾಗಿತು.