ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಎಸ್. ಅರುಣ್ ಕುಮಾರ್ ತಿಳಿಸಿದರು.

ಜಿಪಂ ಹಾಗೂ ಮೈಸೂರು ತಾಲೂಕು ಪಂಚಾಯತ್ ವತಿಯಿಂದ ಇಲವಾಲ ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನುಡಿದಂತೆ ನಡೆದಿದೆ. ಬಡವರು ಹಾಗೂ ಮಹಿಳೆಯರ ಏಳಿಗೆಗೆ ಗ್ಯಾರಂಟಿ ಯೋಜನೆ ಸಹಕಾರಿಯಾಗಿದೆ. ಕುಟುಂಬ ನಿರ್ವಹಣೆಯ ಜೊತೆಗೆ ಅನೇಕ ಮಹಿಳೆಯರು ಸ್ವಾವಲಂಭಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಎಂ.ಬಿ. ಸವಿತಾ ಮಾತನಾಡಿ, ಮಹಿಳೆಯರು ತಮ್ಮ ಸಾಮಾರ್ಥ್ಯದಿಂದ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇ ಆದ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಯಾವುದೇ ಹಿಂಜರಿಕೆಗೆ ಒಳಗಾಗಬಾರದು ಎಂದರು.


ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅನೇಕರು ಸ್ವಾವಲಂಭಿ ಜೀವನ ನಡೆಸುತ್ತಿದ್ದಾರೆ. ಮಹಿಳೆಯರ ಜೀವನ ಸುಧಾರಣೆ ಕಂಡಿದೆ. ಪ್ರತಿಯೊಂದು ಕುಟುಂಬವು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರು.

ತಾಪಂ ಇಒ ಸಿ.ಕೃಷ್ಣ ಮಾತನಾಡಿ, ಪ್ರಕೃತಿ ಸ್ವರೂಪಿಯಾದ ಮಹಿಳೆಯರು ಉತ್ತಮ ಸಮಾಜ ನಿರ್ಮಾಣ ಮಾಡುದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನಮ್ಮ ಗ್ರಾಮೀಣ ಭಾಗದ ಮಹಿಳೆಯರು ಕೀಳಿರಿಮೆ ಬೆಳೆಸಿಕೊಳ್ಳದೆ ಆತ್ಮವಿಶ್ವಾಸದಿಂದ ಬದುಕಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಗ್ಯಾರಂಟಿ ಯೋಜನಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಬಿ. ಕರೀಗೌಡ, ಬಸವಣ್ಣ, ತಾಲೂಕು ಸಮಿತಿಯ ಸದಸ್ಯರಾದ ಚನ್ನಪ್ಪ, ಕರೀಗೌಡ, ರಾಣಿ, ನವೀನ್, ಗ್ರಾಮಾಂತರ ಸಿಡಿಪಿಒ ತಿಮ್ಮಯ್ಯ, ಆಹಾರ ಶಿರಸ್ತೆದಾರ್ ಮಹೇಶ್ ಕುಮಾರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರಾಣಿ, ಆಹಾರ ನಿರೀಕ್ಷಕಿ ನಂದಿನಿ, ಇಲವಾಲ ಗ್ರಾಪಂ ಪಿಡಿಒ ಹೇಮಂತ್ ಮೊದಲಾದವರು ಇದ್ದರು.

ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ಹಸು ಖರೀದಿಸಿದ್ದೇನೆ. ಇದರಿಂದ ನಮ್ಮ ಕುಟುಂಬ ನಿರ್ವಹಣೆ ಸುಧಾರಿಸಿದೆ. ಭೂರಹಿತರಾದ ನಮಗೆ ಅನ್ನಭಾಗ್ಯದಿಂದ ಹೊಟ್ಟೆ ತುಂಬಾ ಊಟ ಮಾಡುವಂತಾಗಿದೆ. ಶಕ್ತಿ ಯೋಜನೆಯಿಂದ ಪ್ರಯಾಣದ ಹಣ ಉಳಿತಾಯವಾಗುತ್ತಿದೆ‌. ಗ್ಯಾರಂಟಿ ಯೋಜನೆಯಿಂದ ನಮಗೆ ಹೆಚ್ಚಿನ ಅನುಕೂಲವಾಗಿದೆ.

- ರತ್ನಮ್ಮ, ಆನಂದೂರು, ಇಲವಾಲ ಹೋಬಳಿ, ಮೈಸೂರು ತಾಲೂಕು