ಮಹಿಳಾ ಸಮಾನತೆ ಉತ್ಸಾಹದ ವಿಷಯ: ಕಮಲಾ

| Published : Mar 30 2024, 01:16 AM IST

ಸಾರಾಂಶ

ಬಾಗಲಗುಂಟೆಯ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಕನ್ನಡ ಪ್ರಥಮ ರಾಜ್ಯಮಟ್ಟದ ಮಹಿಳಾ ಸಮ್ಮೇಳನ ನಡೆಯಿತು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಮಹಿಳೆಯರ ಸಾಧನೆಗೆ ಸಂಬಂಧಿಸಿದಂತೆ ಸಾಹಿತ್ಯ, ರಕ್ಷಣೆ, ಶಿಕ್ಷಣ, ಸಿನಿಮಾ ನಿರ್ದೇಶನಗಳಲ್ಲಿ ಸಮಾನ ವೇತನ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ವಿವಿಧ ಕ್ಷೇತ್ರಗಳ ಸಾಧನೆ ಮತ್ತು ಪ್ರಶಸ್ತಿಗಳು, ಸರ್ಕಾರಿ ವಲಯಗಳಲ್ಲಿ ಮೇಲಾಧಿಕಾರಿಗಳಾಗಿರುವುದು, ಹೀಗೆ ಹಲವು ಸಾಧಕರು ಸಾಧನೆಯಲ್ಲಿ ಸಮಾನತೆ ತೋರಿಸುವುದು ಉತ್ಸಾಹದಾಯಕ ವಿಷಯ ಎಂದು ಸಮ್ಮೇಳನ ಅಧ್ಯಕ್ಷೆ ಹಾಗೂ ಕಾದಂಬರಿಗಾರ್ತಿ ಕಮಲಾ ರಾಜೇಶ್ ಅಭಿಪ್ರಾಯಪಟ್ಟರು.

ಬಾಗಲಗುಂಟೆಯ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕನ್ನಡ ಪ್ರಥಮ ರಾಜ್ಯಮಟ್ಟದ ಮಹಿಳಾ ಸಮ್ಮೇಳನದಲ್ಲಿ ಮಾತನಾಡಿದರು.

ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ, ಇಂದು ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಅವರಿಗೆ ಮೀಸಲಿರಿಸಲಾಗಿದೆ ಎಂದರು.

18 ಮತ್ತು 19ನೆಯ ಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಮತದಾನಕ್ಕೆ, ಸಮಾನ ಕೆಲಸಕ್ಕೆ, ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸರ್ಕಾರಿ ವಲಯದಲ್ಲಿಯೂ ''''ಜೆಂಡರ್ ಪೇ ಗ್ಯಾಪ್'''' ಬಗ್ಗೆ ಧ್ವನಿ ಎತ್ತಲಾಗಿದೆ.

ಸಮಾನತೆಗಾಗಿ ಹಲವು ಮಹಿಳಾವಾದಿಗಳು 1970- 80ರ ದಶಕದಲ್ಲೂ ಹೆಚ್ಚು ಹೋರಾಟ ನಡೆಸಿದ್ದಾರೆ:ಎಂದು ಅಭಿಪ್ರಾಯಪಟ್ಟರು.

ಮಹಿಳಾ ದಿನಾಚರಣೆಯನ್ನು ಮಾಡುವ ದೇಶಗಳು ಸಮಾಜಕ್ಕೆ ಮಾದರಿಯಾದ ಮಹಿಳೆಯರನ್ನು ನೆನೆದು ಗೌರವಿಸುವುದಾಗಿದೆ. ದೇಶಕ್ಕೆ ಕೊಡುಗೆ ನೀಡಿದ ಮಹಿಳೆಯರನ್ನು ನೆನೆಯಲು ಅವರ ಸಾಧನೆಯನ್ನು ಸಾರಲು ಪಠ್ಯಪುಸ್ತಕದಲ್ಲಿ ಅವರ ಬಗ್ಗೆ ಪಠ್ಯಕ್ರಮ ಅಳವಡಿಸಿವೆ.

ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತಾ ಮುನಿರಾಜು ಮಾತನಾಡಿ, ಮಹಿಳೆಯರೂ ಕೂಡ ಶಿಕ್ಷಣ ಕಲಿತು ಸಮಾಜದಲ್ಲಿ ವಿವಿಧ ಆಯಾಮಗಳಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗಿದ್ದಾಳೆ. ಈ ಕಾಲಘಟ್ಟದಲ್ಲಿ ಎಲ್ಲಾ ರಂಗದಲ್ಲೂ ದುಡಿಯುತ್ತಿರುವುದು ನಮ್ಮ ಕಣ್ಮುಂದೆ ಇದೆ ಎಂದರು.

ಸಮಾರಂಭದಲ್ಲಿ ಸಾಹಿತಿ ವೈ.ಬಿ.ಎಚ್ ಜಯದೇವ್ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಕವನ ವಾಚಿಸಿದರು. ವಿಚಾರಗೋಷ್ಠಿ, ಪ್ರಶಸ್ತಿ ಪ್ರದಾನ, ವಿವಿಧ ಲೇಖಕರ ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಂಸ್ಥೆಯ ಅಧ್ಯಕ್ಷ ಈ. ರವೀಶ್, ಗೌರವಾಧ್ಯಕ್ಷೆ ಆರ್. ಶೈಲಜಾ ಬಾಬು, ಖಜಾಂಚಿ ಬಿ. ಟಿ. ಸವಿತಾ, ಉಪಾಧ್ಯಕ್ಷ ಬಿ ಈ ರಮೇಶ್, ಭೂಮಿಕಾ ಸೇವಾ ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ ಮುಂತಾದವರಿದ್ದರು.