ಸಾರಾಂಶ
ದಾವಣಗೆರೆ ತಾಲೂಕಿನ ಕಳವೂರುನಲ್ಲಿ ಮಾತೃಶ್ರೀ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ ಬಾಲ್ಯ ವಿವಾಹ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಬಾಲ್ಯವಿವಾಹದಿಂದ ಮಹಿಳಾ ಸ್ವತಂತ್ರ ಇಲ್ಲದಂತಾಗಿದ್ದು, ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣದ ಅವಶ್ಯಕತೆ ಇದೆ. ಮಕ್ಕಳಿಗೆ ಜವಾಬ್ದಾರಿ, ಪ್ರೀತಿ, ವಿನಯ, ವಿದ್ಯೆ, ಸಂಸ್ಕಾರ, ಆಚಾರ-ವಿಚಾರ, ನೈತಿಕತೆ ಕಲಿಸಿ ಎಂದು ಮಾತೃಶ್ರೀ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಪಿ.ಲಕ್ಷ್ಮಿ ಹೇಳಿದರು.ದಾವಣಗೆರೆ ತಾಲೂಕಿನ ಕಳವೂರು ಗ್ರಾಮದಲ್ಲಿ ಮಾತೃಶ್ರೀ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿದ ಬಾಲ್ಯ ವಿವಾಹ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುವ ಬದಲಾಗಿ ಶಿಕ್ಷಣ ನೀಡಿ. ಸಮಾಜದ ರೀತಿ ನೀತಿಗಳ ಬಗ್ಗೆ ತಿಳಿಸಿಕೊಡಿ ಎಂದು ಹೇಳಿದರು.ಅಂಗನವಾಡಿ ಶಿಕ್ಷಕಿ ಎಂ.ಅನಿತಾ ಮಾತನಾಡಿ, ಹೆಣ್ಣಾಗಲಿ, ಗಂಡಾಗಲಿ ಚಿಕ್ಕ ವಯಸ್ಸಿನಲ್ಲಿ ಮದುವೆ ಬೇಡ. ಬಾಲ್ಯ ವಿವಾಹದಿಂದ ಹಲವು ಅನಾರೋಗ್ಯ ಸಮಸ್ಯೆಗಳು ಬರುತ್ತವೆ. ಬಾಲ್ಯ ವಿವಾಹ ಒಂದು ಸಮಾಜಕ್ಕೆ ಪಿಡುಗು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಗೇಶ್, ಕುಮಾರ್, ಆಂಜನೇಯ, ಎನ್.ಜಿ.ಶಿವಕುಮಾರ, ಪ್ರದೀಪ್, ಆನಂದ ಹಾಗೂ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.