ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಸಬಲರಾಗಲಿ: ನ್ಯಾ. ಮಹಾಂತೇಶ ದರಗದ

| Published : Dec 11 2024, 12:45 AM IST

ಸಾರಾಂಶ

ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು.

ಮಹಿಳೆಯರ ಮೇಲಿನ ದೌರ್ಜನ್ಯ, ಲಿಂಗತ್ವಧಾರಿತ ದೌರ್ಜನ್ಯ ನಿವಾರಣೆ ಕಾನೂನು ಅರಿವು ಜಾಗೃತಿ ಆಂದೋಲನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ಸಂಗಪ್ಪ ದರಗದ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ-ಒನ್ ಸ್ಟಾಪ್ ಸೆಂಟರ್ ಹಾಗೂ ಪ್ರಕ್ರಿಯೆ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಭಾಂಗಣದಲ್ಲಿ 75ನೇ ಸಂವಿಧಾನ ಸಮರ್ಪಣಾ ಅಮೃತ ಮಹೋತ್ಸವ ಅಂಗವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ನಿವಾರಣೆ, ಲಿಂಗತ್ವಧಾರಿತ ದೌರ್ಜನ್ಯ ನಿವಾರಣೆ ಕಾನೂನು ಅರಿವು ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಸಮಾಜದಲ್ಲಿ ಕೃತ್ಯ ಎಸಗಿದಾಗ ಪ್ರಶ್ನಿಸುವ ಹಕ್ಕು ಮಹಿಳೆಗಿದೆ. ಎಲ್ಲರೂ ಸಮಾನರು ಎಂದರೆ ಸಾಲದು. ಮಹಿಳೆಯರಿಗಿರುವ ಸಮಾನ ಅವಕಾಶ ನೀಡಬೇಕು. ಅಂದಾಗ ಮಹಿಳೆಯರು ಹಿಂದೆ ಉಳಿಯುವುದನ್ನು ತಡೆದಂತಾಗುತ್ತದೆ. ಸಮಾಜದಲ್ಲಿ ಮಹಿಳೆಯರು ತುಂಬಾ ನೋವು ಅನುಭವಿಸುತ್ತಾರೆ. ಪುರುಷ ಪ್ರಧಾನ ಸಮಾಜ ಆಗಿದ್ದು ಮಹಿಳಾ ಪ್ರಧಾನ ಸಮಾಜ ನಿರ್ಮಾಣ ಮಾಡಬೇಕು. ಆ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ್ ವೈ. ಶೆಟಪ್ಪನವರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ, ತಹಸೀಲ್ದಾರ ವಿಠಲ್ ಚೌಗಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಮಕ್ಕಳ ಮತ್ತು ಮಹಿಳೆಯ ಸಮನ್ವಯಾಧಿಕಾರಿ ಹರೀಶ್ ಜೋಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತ ಸ್ವಾಮಿ ಪೂಜಾರ, ಬೆಂಗಳೂರಿನ ಹಿರಿಯ ವಕೀಲರು ಬಿ.ಎಂ. ಮಂಜುನಾಥ್, ಭಾತೃತ್ವ ಸಂಸ್ಥೆ ಕೊಪ್ಪಳ ಜಿಲ್ಲಾ ಸಂಯೋಜಕ ಎ. ಗಫರ್, ಕೊಪ್ಪಳ ಸಿಪಿಐ ಆಂಜನೇಯ ಸ್ವಾಮಿ, ಯಲಬುರ್ಗಾ ಸ್ವಾಂತನ ಕೇಂದ್ರದ ಸರೋಜಾ ಬಾಕಳೆ, ದೇವದಾಸಿ ಪುನರ್ವಸತಿ ಯೋಜನೆಯ ದಾದೇಸಾಬ್ ಹಿರೇಮನಿ ಸೇರಿದಂತೆ ಸಖಿ ಒನ್ ಸ್ಟಾಪ್ ಸೆಂಟರ್ ತಂಡ ಸದಸ್ಯರು ಮತ್ತು ಕೊಪ್ಪಳ ಜಿಲ್ಲಾ ಮಹಿಳಾ ಸಬಲೀಕರಣ ಮತ್ತು ತಾಲೂಕು ಸಾಂತ್ವನ ಕೇಂದ್ರ ತಂಡ ಸದಸ್ಯರು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಂಗೋಲಿ, ಪ್ರಬಂಧ, ಸೆಲ್ಫಿ ಚಿತ್ರಗಳು, ಚಿತ್ರಕಲೆ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.