ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿ ಮಹಿಳೆಯರು ಸಿದ್ಧಪಡಿಸುವ ತಿಂಡಿ ತಿನಿಸುಗಳ ಉತ್ಪನ್ನಗಳನ್ನು ಮಾರಾಟಕ್ಕೆ ಮಾಸಿಕ ಸಂತೆ ಆಯೋಜನೆ ಉತ್ತಮ ವೇದಿಕೆಯಾಗುವುದರ ಜತೆಗೆ ಆರ್ಥಿಕವಾಗಿ ಸಶಕ್ತವಾಗಲು ಸಹಕಾರಿಯಾಗಲಿದೆ.
ಗಜೇಂದ್ರಗಡ: ಮಹಿಳೆಯರು ಆರ್ಥಿಕವಾಗಿ ಸದೃಢರಾಗುವ ಮೂಲಕ ಸ್ವಾವಲಾಂಬಿಗಳಾಗಲು ಮಹಿಳೆಯರೇ ತಯಾರಿಸುವ ಹಾಗೂ ಸಿದ್ಧಪಡಿಸುವ ಉತ್ಪನ್ನಗಳ ಮಾರಾಟಕ್ಕೆ ಮಾಸಿಕ ಸಂತೆಯು ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯಿತಿ ಪಂ. ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ತಿಳಿಸಿದರು.
ತಾಲೂಕಿನ ಗೋಗೇರಿ ಗ್ರಾಮದಲ್ಲಿ ಗುರುವಾರ ನಡೆದ ಸಂಜೀವಿನಿ ಯೋಜನೆಯಡಿ ಸಂಜೀವಿನಿ ಒಕ್ಕೂಟದ ಮಾಸಿಕ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಸಂಪನ್ಮೂಲಗಳನ್ನು ಬಳಕೆ ಮಾಡಿ ಮಹಿಳೆಯರು ಸಿದ್ಧಪಡಿಸುವ ತಿಂಡಿ ತಿನಿಸುಗಳ ಉತ್ಪನ್ನಗಳನ್ನು ಮಾರಾಟಕ್ಕೆ ಮಾಸಿಕ ಸಂತೆ ಆಯೋಜನೆ ಉತ್ತಮ ವೇದಿಕೆಯಾಗುವುದರ ಜತೆಗೆ ಆರ್ಥಿಕವಾಗಿ ಸಶಕ್ತವಾಗಲು ಸಹಕಾರಿಯಾಗಲಿದೆ. ಸಂಜೀವಿನಿ ಸಂಘದ ಉತ್ಪನ್ನವು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ವಿಭಿನ್ನತೆ ಜತೆಗೆ ಉತ್ಪನ್ನದ ಗುಣಮಟ್ಟ ಮತ್ತು ಗ್ರಾಹಕರಿಗೆ ತಲುಪಿಸುವಾಗ ಉತ್ತಮ ಪ್ಯಾಕೇಜಿಂಗ್ ಹೊಂದಿದ್ದರೆ ಮಾತ್ರ ಉತ್ಪನ್ನಗಳು ಜನರನ್ನು ತಲುಪುತ್ತವೆ. ಅಲ್ಲದೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆ ನಿಗದಿಪಡಿಸಿದರೆ ಹೆಚ್ಚಿನ ವಸ್ತುಗಳು ಮಾರಾಟವಾಗುತ್ತವೆ ಎಂದರು. ಗ್ರಾಮದ ಮುಖಂಡರಾದ ಕೆ.ಕೆ. ಭಗವಾನ್, ಎಂ.ಕೆ. ಬಾದಾಮಿ ಹಾಗೂ ಕೆ.ಎಸ್. ಕೊಡತಗೇರಿ ಮಾತನಾಡಿ, ಗೋಗೇರಿ ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟದಿಂದ ಮಾಸಿಕ ಸಂತೆ ನಡೆಯುತ್ತಿರುವುದು ಖುಷಿಯ ವಿಚಾರ. ಗ್ರಾಮದ ಸ್ವಸಾಹಾಯ ಸಂಘಗಳ ಮಹಿಳಾ ಸದಸ್ಯರು ಹೊಸ ಹೊಸ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ತಲುಪಿಸಿದರೆ ಒಳ್ಳೆಯ ಆದಾಯ ಬರಲಿದೆ. ಮಾಸಿಕ ಸಂತೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮಾತ್ರ ನೋಡುತ್ತಿದ್ದೇವು. ಈಗ ಗ್ರಾಮೀಣ ಪ್ರದೇಶದಲ್ಲಿಯೂ ಮಹಿಳೆಯರು ತಯಾರಿಸಿ ಮಾರುಕಟ್ಟೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.ಎನ್ಆರ್ಎಲ್ಎಂ ಘಟಕದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ(ಟಿಪಿಎಂ) ವೀರೇಶ ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಬಸಪ್ಪ ಕೆರಿ, ಇಮಾಮಸಾಬ ಬಾಗವಾನ, ಅನಿಲಕುಮಾರ ಕೆ., ಒಕ್ಕೂಟಗಳ ಸಿಬ್ಬಂದಿಗಳಾದ ಎಂಬಿಕೆ, ಎಲ್ಸಿಆರ್ಪಿ, ಕೃಷಿ ಸಖಿ, ಪಶು ಸಖಿ ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಇದ್ದರು.ಗಮನ ಸೆಳೆದ ವಸ್ತುಗಳುಶೇಂಗಾ ಎಣ್ಣೆ, ಚಕ್ಕುಲಿ, ಉಪ್ಪಿನಕಾಯಿ, ಟೊಮೆಟೋ ಉಪ್ಪಿನಕಾಯಿ, ಎಣಿಕೆ ವಸ್ತುಗಳು, ಶಾವಿಗೆ, ಕಾರದ ಪುಡಿ, ಸೀರೆ ಸೇರಿದಂತೆ ಇತರೆ ವಸ್ತುಗಳು ಮಾಸಿಕ ಸಂತೆ ಮಾರಾಟದಲ್ಲಿ ಗಮನ ಸೆಳೆದವು.