ಮಹಿಳೆಯರ ಕಲ್ಯಾಣಕ್ಕಾಗಿಯೇ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದ್ವಿನಿಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಲು ಪ್ರಯತ್ನಿಸಬೇಕು ಎಂಬುದಾಗಿ ಕಾಪು ತಾಪಂ ಇಓ ವಿಜಯಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಪು

ಮಹಿಳೆಯರ ಕಲ್ಯಾಣಕ್ಕಾಗಿಯೇ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದ್ವಿನಿಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಲು ಪ್ರಯತ್ನಿಸಬೇಕು ಎಂಬುದಾಗಿ ಕಾಪು ತಾಪಂ ಇಓ ವಿಜಯಕುಮಾರ್ ಹೇಳಿದರು. ಅವರು ಇಲ್ಲಿನ ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಕಾಪು ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕಾ ಕಂಪೆನಿಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಂಪೆನಿಯ ಅಧ್ಯಕ್ಷೆ ಉಷಾ ದಯಾನಂದ್ ಅವರು ಅಧ್ಯಕ್ಷತೆಯಲ್ಲಿ ಜರುಗಿದ ಈ ಮಹಾಸಭೆಯಲ್ಲಿ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ ರೀನಾ ಹೆಗ್ಡೆ ಸಂಸ್ಥೆಯ ಗತವರ್ಷದ ವರದಿ, ವಾರ್ಷಿಕ ಆಯವ್ಯಯಗಳ ಪಟ್ಟಿಯನ್ನೂ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.

ಮಾಹಿತಿ: ಬ್ರಹ್ಮಾವರದ ರುಢ್ ಸೆಟ್ ತರಬೇತಿ ಸಂಸ್ಥೆಯ ಡಾ.ಬೊಮ್ಮಯ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಹಿಳೆಯರಿಗೆ ಉತ್ತಮ ಮಾಹಿತಿಯನ್ನು ನೀಡಿದರು. ಉಡುಪಿ ಜಿಪಂ ಎನ್ಆರ್‌ಎಲ್‌ಎಂ ಸಹಾಯಕ ಪ್ರಬಂಧಕಿ ಡಾ.ಸೌಮ್ಯಾ ಕುಮಾರಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಂಪೆನಿಯ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆಯ ವ್ಯಕ್ತಪಡಿಸಿದರು. ಎನ್ಆರ್‌ಎಲ್ಎಂನ ಕಾಪು ತಾಲೂಕು ಸಂಯೋಜಕಿ ಶ್ರೀಮತಿ ಉಪಸ್ಥಿತರಿದ್ದರು.

ಕಂಪೆನಿಯ ನಿರ್ದೇಶಕಿಯರಾದ ಗೀತಾ ವಾಗ್ಳೆ ಬಂಟಕಲ್ಲು ಸ್ವಾಗತಿಸಿ, ಶಾರದೇಶ್ವರಿ ವಂದಿಸಿ, ಪವಿತ್ರಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿಯರಾದ ಕವಿತಾ ಹಿತೇಂದ್ರ, ಮಮತಾ ವಾಗ್ಳೆ, ಕಸ್ತೂರಿ, ರೇಖಾ ಚಂದ್ರಶೇಖರ್, ಶರ್ಮಿಳಾ, ಶಕುಂತಳಾ, ಹಾಗೂ ಕಂಪೆನಿಯ ಷೇರುದಾರ ಸದಸ್ಯರು, ಎನ್ಆರ್‌ಎಲ್ಎಂ ಕಾಪು ತಾಲೂಕಿನ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಂಪೆನಿಯ ಉತ್ಪಾದಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನೂ ಹಮ್ಮಿಕೊಳ್ಳಲಾಗಿತ್ತು.