ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಶ್ವಸಂಸ್ಥೆಯು 2024 ರ ಧ್ಯೇಯವಾಕ್ಯವನ್ನು ''ಮಹಿಳೆಯರಲ್ಲಿ ಹೂಡಿಕೆ ಮಾಡಿ: ಪ್ರಗತಿಯನ್ನು ವೇಗಗೊಳಿಸಿ'' ಎಂದು ಗೊತ್ತುಪಡಿಸಿದೆ, ಇದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವೈವಿಧ್ಯತೆ ಮತ್ತು ಸಬಲೀಕರಣದ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಚಿಕ್ಕಬಳ್ಳಾಪುರ ಮಹಿಳಾ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ನಿರ್ಮಲ ಅಭಿಪ್ರಾಯಪಟ್ಟರು.
ನಗರದ ಪೋಲಿಸ್ ಸಮುದಾಯಭವನದಲ್ಲಿ ಶನಿವಾರ ಬಜ್ ಇಂಡಿಯಾ ಸೇವಾ ಸಂಸ್ಥೆಯು ಏರ್ಪಡಿಸಿದ್ದ ಅಂತರ್ ರಾಷ್ಟ್ರೀಯ ಮಹಿಳಾದಿನಾಚರಣೆ ಉದ್ಘಾಟಿಸಿ ಮಾತನಾಡಿ, ಈ ಅಭಿಯಾನದ ಮೂಲಕ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆ ಮತ್ತು ಸಬಲೀಕರಣದ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಲಿಂಗ ಸಮಾನತೆಯನ್ನು ಮುನ್ನಡೆಸುವಲ್ಲಿ ಸೇರ್ಪಡೆಯ ಪ್ರಮುಖ ಪಾತ್ರವನ್ನು ಒತ್ತಿಹೇಳಲು ಬಲವಾದ ಒತ್ತು ನೀಡಲಾಗಿದೆ ಎಂದರು.ಮಹಿಳೆ ಕೌಶಲದತ್ತ ಗಮನ ಹರಿಸಲಿಮಹಿಳೆಯರು ಅನಾವಶ್ಯಕ ಮೊಬೈಲ್ ಬಳಕೆ ಕಡಿಮೆ ಮಾಡಿ, ದುಡಿಮೆ ಮಾಡುವತ್ತ ಗಮನ ಹರಿಸಿ, ಉದ್ಯಮ ಶೀಲ ಕೌಶಲತೆಯ ಬಗ್ಗೆ ಗಮನ ಹರಿಸಿ ಆರ್ಥಿಕವಾಗಿ ಪುರುಷರಿಗಿಂತ ಹೆಚ್ಚು ಸಬಲರಾಗಿ ಸಮಾಜ ಮತ್ತು ದೇಶದ ಪ್ರಗತಿಗೆ ಸಹಕಾರಿಗಳಾಗಿ ಎಂದು ಮಹಿಳೆಯರಿಗೆ ಕರೆ ನೀಡಿದರು.ತಾಲೂಕು ವೈದ್ಯಾಧಿಕಾರಿ ಡಾ.ಮಂಜುಳ ಮಾತನಾಡಿ, ಮಹಿಳಾ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಪ್ರತಿಪಾದಿಸುವಲ್ಲಿ ಸಾಮೂಹಿಕ ಕ್ರಿಯೆ ಮತ್ತು ಸಹಯೋಗಕ್ಕೆ ವೇದಿಕೆಯನ್ನು ಒದಗಿಸುತ್ತದೆ. ವಿಶ್ವ ಆರ್ಥಿಕ ವೇದಿಕೆಯು ಲಿಂಗ ಸಮಾನತೆಯನ್ನು ಸಾಧಿಸಲು ಒಂದು ಶತಮಾನವನ್ನು ತೆಗೆದುಕೊಳ್ಳುಬಹುದು ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ ಎಂದರು.
ಬಜ್ ಇಂಡಿಯಾ ಸಂಸ್ಥೆಯ ಸಿಇಓ ಉತ್ತರಾ ನಾರಾಯಣನ್ ಮಾತನಾಡಿ, ಬೆಟರ್ ಪ್ಯೂಚರ್ ಲಾಭೋದ್ದೇಶವಿರದ ಅಂಗಸಂಸ್ಥೆಯಾದ ಬಜ್ ಇಂಡಿಯಾ ಟ್ರಸ್ಟ್ ಗ್ರಾಮಿಣ ಉದ್ಯಮಶೀಲ ಮಹಿಳೆಯರಿಗೆ ನಾಯಕತ್ವ ತರಬೇತಿ ನೀಡುವ ಮಹತ್ಕಾರ್ಯ ನೆರವೇರಿಸುತ್ತಿದೆ.ಗ್ರಾಮೀಣ ಮಹಿಳಾ ಶಕ್ತಿಯನ್ನು ಸಶಕ್ತಗೊಳಿಸಲು, ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಉದ್ಯಮಗಳ ವಿನಿಮಯ ಮಾಡಿಕೊಳ್ಳಲು ಬಜ್ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಾಯಕ ನಿರ್ಧೇಶಕ ಗಂಗಾಧರ್, ಬಜ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರಾದ ಸುರೇಶ್, ರಾಜೇಶ್, ಮಲ್ಲಿಖಾರ್ಜುನ್, ಮತ್ತಿತರರು ಇದ್ದರು.