ಮಹಿಳೆಯರು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿ

| Published : Jul 06 2024, 12:54 AM IST

ಸಾರಾಂಶ

ಹೊಸಕೋಟೆ: ಮಹಿಳೆಯರು ಕಾಲಕಾಲಕ್ಕೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಈಸ್ಟ್ ಪಾಯಿಂಟ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರೇಮ್ ತಿಳಿಸಿದರು.

ಹೊಸಕೋಟೆ: ಮಹಿಳೆಯರು ಕಾಲಕಾಲಕ್ಕೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಈಸ್ಟ್ ಪಾಯಿಂಟ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರೇಮ್ ತಿಳಿಸಿದರು.

ತಾಲೂಕಿನ ಮಾರಸಂಡಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಈಸ್ಟ್ ಪಾಯಿಂಟ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಸ್ತ್ರೀ ರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಸಂಕೋಚದಿಂದ ಕೆಲವು ಗುಪ್ತ ಸಮಸ್ಯೆಗಳನ್ನು ಬಚ್ಚಿಟ್ಟು ರೋಗ ಉಲ್ಭಣಗೊಂಡಿರುವ ಘಟನೆಗಳು ಸಂಭವಿಸಿವೆ. ಆದ್ದರಿಂದ ಮಹಿಳೆಯರು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡು ಸ್ವಾಸ್ಥ್ಯ ಜೀವನ ನಡೆಸಲು ಅನುಕೂಲವಾಗುವಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಇಂತಹ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಡಾ.ರತಿಪ್ರಿಯ ಮಾತನಾಡಿ, ಗ್ರಾಮೀಣ ಮಹಿಳೆಯರು ಸಂಕೋಚ ಮತ್ತು ಮೂಢನಂಬಿಕೆಗಳಿಂದಾಗಿ ಸ್ತನ ಕ್ಯಾನ್ಸರ್ ಮತ್ತು ಇನ್ನಿತರ ಲೈಂಗಿಕ ರೋಗಗಳ ಬಗ್ಗೆ ವೈದ್ಯರಿಗೆ ಮಾಹಿತಿ ನೀಡದೆ ರೋಗ ಉಲ್ಬಣಗೊಂಡು ಅಂತಿಮ ಹಂತದಲ್ಲಿ ಚಿಕಿತ್ಸೆಗೆ ಬಂದಾಗ ಸಾವನಪ್ಪಿರುವ ಘಟನೆಗಳು ಆಗಿವೆ. ಇಂತಹ ಶಿಬಿರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಅಲ್ಲದೆ ನಿಯಮಿತವಾಗಿ ರಕ್ತದೊತ್ತಡ, ಮಧುಮೇಹ ಕಣ್ಣಿನ ತಪಾಸಣೆಯನ್ನು ಮಾಡಿಸಿ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಹರೀಶ್ ಕುಮಾರ್‌, ಜ್ಞಾನವಿಕಾಸ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಸಂಧ್ಯಾ, ಈಸ್ಟ್ ಪಾಯಿಂಟ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನರೇಂದ್ರ ಪಿ.ದತ್ತಿ, ಒಬಿಜಿ ಮುಖ್ಯಸ್ಥ ಶ್ರೀನಿವಾಸ್, ಪೀಲ್ಡ್ ಆಫೀಸರ್ ರವಿ, ಆಸ್ಪತ್ರೆಯ ಇತರ ಸಿಬ್ಬಂದಿ ಮತ್ತು ಜ್ಞಾನವಿಕಾಸ ಸಮನ್ವಯ ಅಧಿಕಾರಿ ವಿಘ್ನೇಶ್ವರ, ಕೇಂದ್ರದ ಸದಸ್ಯರು ಭಾಗವಹಿಸಿದ್ದರು.

ಪೋಟೋ: 5 ಹೆಚ್‌ಎಸ್‌ಕೆ 3

ಹೊಸಕೋಟೆಯ ಮಾರಸಂಡಹಳ್ಳಿಯಲ್ಲಿ ಹಮ್ಮಿಕೊಂಡ ಸ್ತ್ರೀರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು.