ಮಹಿಳೆಯರು ಕುಗ್ಗದೆ ಛಲದಿಂದ ಗುರಿ ಸಾಧಿಸಲಿ: ಎಸ್.ಆರ್. ನಾಯಕ

| Published : Mar 28 2025, 12:32 AM IST

ಮಹಿಳೆಯರು ಕುಗ್ಗದೆ ಛಲದಿಂದ ಗುರಿ ಸಾಧಿಸಲಿ: ಎಸ್.ಆರ್. ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಜೀವನದಲ್ಲಿ ಕುಗ್ಗಬಾರದು. ಛಲದಿಂದ ಶಿಕ್ಷಣ ಪಡೆದು ಸಾಧನೆಯ ಗುರಿ ತಲುಪಬೇಕು ಎಂದು ಇಳಕಲ್ಲ ನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಎಸ್.ಆರ್. ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಮಹಿಳೆಯರು ಜೀವನದಲ್ಲಿ ಕುಗ್ಗಬಾರದು. ಛಲದಿಂದ ಶಿಕ್ಷಣ ಪಡೆದು ಸಾಧನೆಯ ಗುರಿ ತಲುಪಬೇಕು ಎಂದು ಇಳಕಲ್ಲ ನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಎಸ್.ಆರ್. ನಾಯಕ ಹೇಳಿದರು.

ನಗರದ ಎಸ್.ಆರ್. ಕಂಠಿ ವೇದಿಕೆಯಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆ ಇಂದು ಜೀವನದಲ್ಲಿ ಸಾಧನೆಯ ಶಿಖರ ತಲುಪಬೇಕಾದರೆ ಶಿಕ್ಷಣ ಅವಶ್ಯವಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಗೆ ಶಿಕ್ಷಣ ಮರೀಚಿಕೆಯಾಗಿತ್ತು. ಆದರೆ, ಇಂದು ಜಗತ್ತಿನ ಎಲ್ಲ ರಂಗದಲ್ಲಿ ಪುರುಷರಿಗಿಂತ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಅದಕ್ಕೆ ಶಿಕ್ಷಣವೇ ಕಾರಣ ಎಂದು ಹೇಳಿದರು.

ಇಂದು ಕಾಲ ಬಹಳ ಬದಲಾಗಿದೆ. ವಿಜ್ಞಾನ ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದ ಶಿಕ್ಷಣ ಕಲಿಕೆಯಲ್ಲಿ ಒಂದು ಕಡೆ ಮಹಿಳೆ ಮೇಲುಗೈ ಸಾಧಿಸಿದ್ದಾಳೆ. ಆದರೆ ಇನ್ನೊಂದಡೆ ಅದೇ ಮಹಿಳೆ ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಬದುಕನ್ನು ಅಸ್ಥಿರಗೊಳಿಸಿಕೊಳ್ಳುತ್ತಿದ್ದಾಳೆ. ಯುವತಿಯರು ಜಾಲತಾಣಗಳ ಮೂಲಕ ಅನಾಮಿಕ ಯುವಕರ ಪ್ರೀತಿಯ ಮೋಹದ ಪಾಶಕ್ಕೆ ಸಿಲುಕಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಇದರಿಂದ ಕುಟುಂಬ, ತಂದೆ-ತಾಯಿಗಳ ನೆಮ್ಮದಿ ಹಾಳು ಮಾಡಿ, ತಾವೂ ಹಾಳಾಗುತ್ತಿದ್ದಾರೆ. ಯುವತಿಯರು ಇದರ ಬಗ್ಗೆ ಜಾಗೃತರಾಗಿ ಸೂಕ್ತ ಬದುಕು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಮಾತನಾಡಿ, ಇಂದು ಶಿಕ್ಷಣ ಇಲ್ಲದೆ ಹೆಣ್ಣಿನ ಬದುಕು ಪರಿಪೂರ್ಣವಾಗಲಾರದು. ಪ್ರಸ್ತುತ ಜಗತ್ತಿನಲ್ಲಿ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಶಿಕ್ಷಣವೇ ಒಂದು ಶಕ್ತಿಯಾಗಿದೆ ಎಂದರು.

ಇಳಕಲ್ಲ ಸಹಕಾರಿ ಬ್ಯಾಂಕಿನ ನಿರ್ದೇಶಕರಿ ಲತಾ ಹೇರೂರ ಮಾತನಾಡಿ, ಮುಂದುವರಿದ ದೇಶಗಳಲ್ಲಿ ಮಹಿಳೆಯರಿಗೆ ಇರುವ ವಿಫುಲ ಅವಕಾಶಗಳು ಭಾರತದಲ್ಲಿರುವ ಮಹಿಳೆಯರಿಗೂ ಸಿಗುವಂತಾಗಬೇಕು ಎಂದು ಹೇಳಿದರು.

ಕಂಠಿ ವೇದಿಕೆಯ ಅಧ್ಯಕ್ಷೆ ಮಹಾದೇವಿ ತೊಂತನಾಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶೈಲಾ ಪಟ್ಟಣಶಟ್ಟಿ ಇದ್ದರು.

ಜ್ಯೋತಿ ಅಂಗಡಿ, ಶಿಲ್ಪಾ ಅಂಗಡಿ, ಅನುರಾಧಾ ಪಟ್ಟಣಶಟ್ಟಿ, ಮೀನಾಕ್ಷಿ ಗೋನಾಳ, ಉಮಾ ಅಂಗಡಿ, ಜಯಶ್ರೀ ನೀರಲಕೇರಿ, ಶೋಭಾ ಲವಳಸರ, ಅಕ್ಕಮ್ಮ ಕಕ್ಕಸಗೇರಿ, ಮೇಘಾ ಕಕ್ಕಸಗೇರಿ, ರಾಜೇಶ್ವರಿ ಅಂಗಡಿ, ಗೀತಾ ನಂದಾಪೂರ, ಕಮಲಾಕ್ಷಿ ಅಂಗಡಿ, ಗಿರಿಜಾ ಶಟ್ಟರ ಮತ್ತಿತರರು ಭಾಗವಹಿಸಿದ್ದರು.

ನೇತ್ರಾವತಿ ಅಂಗಡಿ ಪ್ರಾರ್ಥಿಸಿದರು. ನೀಲಾಂಬಿಕಾ ಬಾದಿಮನಾಳ ಸ್ವಾಗತಿಸಿದರು. ಸಾವಿತ್ರಿ ಬೆಲ್ಲದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾ ರಾಕಿ ಪರಿಚಯಿಸಿದರು. ವಿಜಯಲಕ್ಷೀ ಕಂಠಿ ನಿರೂಪಿಸಿದರು. ವಿಜಯಲಕ್ಷೀ ಲೆಕ್ಕಿಹಾಳ ವಂದಿಸಿದರು.

ಸಾಧಕ ಮಹಿಳೆಯರು, ವಿದ್ಯಾರ್ಥಿಗಳಿಗೆ ಸನ್ಮಾನ:

ಮಹಿಳಾ ದಿನಾಚರಣೆ ಅಂಗವಾಗಿ ಸಾರ್ವಜನಿಕ ಕ್ಷೇತ್ರದ ಸೇವೆಯಲ್ಲಿರುವ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಇಳಕಲ್ಲ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕಿ ಲತಾ ಹೇರೂರ, ನಗರ ಪೊಲೀಸ್ ಠಾಣೆಯ ಮಹಿಳಾ ಸಬ್ಇನಸ್ಪೆಕ್ಟರ್‌ ಎಸ್.ಆರ್. ನಾಯಕ, ಸಮಾಜ ಸೇವಕಿಯರಾದ ಬಸವರಾಜೇಶ್ವರಿ ಮೇರನಾಳ, ಕವಿತಾ ಚಟ್ಟೇರ ಮತ್ತು ಸ್ವಯಂ ಉದ್ಯೋಗಿಗಳಾದ ತುಳಸಾಬಾಯಿ ಹುಬ್ಬಳ್ಳಿ, ದೀಪಾ ಕರವೀರಮಠ, ಪ್ರಗತಿಪರ ರೈತ ಮಹಿಳೆ ಮಮತಾ ಮರೋಳ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ಶೈಕ್ಷಣಿಕ ರಂಗದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಾದ ಡಾ.ಐಶ್ವರ್ಯ ಅಂಗಡಿ,ಐಶ್ವರ್ಯ ಮಠ, ಅಮೃತಾ ಅಂಗಡಿ ಅವರನ್ನು ಪುರಸ್ಕರಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.