ಮಾಲೂರು: ಕಡಿಮೆ ದರ ಹಾಗೂ ಕಡಿಮೆ ತೂಕದಲ್ಲಿ ಚಿನ್ನದ ಆಭರಣಗಳನ್ನು ಮಾಡಿಕೊಡುವುದಾಗಿ ಮಹಿಳೆಯರನ್ನು ನಂಬಿಸಿ ಸುಮಾರು ೮ ಕೋಟಿ ರು.ಗಳ ಚಿನ್ನಾಭರಣ ಸಮೇತ ಪರಾರಿಯಾಗಿರುವ ಘಟನೆ ಪಟ್ಟಣದ ಮಾರುತಿ ಬಡಾವಣೆ ಯಲ್ಲಿ ನಡೆದಿದೆ.ನಗರದ ಮಾರುತಿ ಬಡಾವಣೆಯಲ್ಲಿರುವ ವೆಂಕಟೇಶ್ವರ ಆಸ್ವತ್ರೆ ರಸ್ತೆಯಲ್ಲಿದ್ದ ರಾಮದೇವ್‌ ಜೂಯಲರ್ಸ್‌ ಅಂಗಡಿ ಮಾಲೀಕ ಬುಂಡಾರಾಮ್‌ ಮಾಲೂರಿನ ಮಹಿಳೆಯರನ್ನು ವಂಚಿಸಿದವನಾಗಿದ್ದಾನೆ. ಮೂಲತಃ ರಾಜಸ್ತಾನವನ್ನಾಗಿರುವ ಬುಂಡಾರಾಮ್‌ ಕಳೆದ ೧೫ ವರ್ಷಗಳಿಂದ ಇಲ್ಲಿನ ಸೋಲಂಕಿ ಒಡವೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷವಷ್ಟೇ ಸೋಲಂಕಿಯಿಂದ ಹೊರಬಂದು ಹೊಸ ಅಂಗಡಿ ತರೆದಿದ್ದ. ಸೋಲಂಕಿ ಬಳಿ ಕೆಲಸ ಮಾಡುತ್ತಿದ್ದ ಪರಿಚಯವಾಗಿದ್ದ ಮಹಿಳೆಯನ್ನು ಸೆಳೆದಿದ್ದ ಬಂಡಾರಾಮ್‌ ತಮ್ಮ ಹಳೇ ಒಡವೆಯನ್ನು ಕಡಿಮೆ ವೇಸ್ಟೇಜ್‌ನಲ್ಲಿ ಕರಗಿಸಿ ಹೊಸ ಒಡವೆ ಮಾಡಿಕೊಡುವುದಾಗಿ ನಂಬಿಸಿದ್ದ.

ಇದಕ್ಕಾಗಿ ೧೮೦ ಮಹಿಳೆರಿದ್ದ ವಾಟ್ಸಪ್‌ ಗ್ರೂಪ್‌ ರಚಿಸಿ ಅದರಲ್ಲಿ ಹೊಸ ಹೊಸ ಡಿಸೈನ್‌ಗಳನ್ನು ಹಾಕುತ್ತಿದ್ದ. ಅತಿ ಕಡಿಮೆ ತೊಕದಲ್ಲಿ ಸುಂದರ ಆಭರಣಗಳನ್ನು ಕಂಡ ಬಹುತೇಕ ಮಹಿಳೆಯರು ತಮ್ಮಲ್ಲಿದ್ದ ಹಳೆ ಮಾಂಗಲ್ಯ, ತಾಳಿ, ಓಲೆ ಹಾಗೂ ಬ್ರಾಸ್‌ ಲೈಟ್‌ಗಳನ್ನು ಕೊಟ್ಟಿದ್ದಲ್ಲದೇ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸಿದ್ದರು. ಕಳೆದ ವಾರದಿಂದ ಅಂಗಡಿ ತೆಗೆಯದ ಬುಂಡಾರಾಮ್‌ ಮೊಬೈಲ್‌ ಸ್ವೀಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದರಿಂದ ವಂಚನೆಗೆ ಒಳಗಾದ ಮಹಿಳೆಯರು ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ಒಡವೆ ಹಾಗೂ ಹಣವನ್ನು ವಾಪಸ್ಸು ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.