ಸಾರಾಂಶ
ಯಲಬುರ್ಗಾ:
ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆನ್ನುವ ಸದುದ್ದೇಶದಿಂದ ಕೇಂದ್ರ, ರಾಜ್ಯ ಸರ್ಕಾರ ವರದಕ್ಷಿಣೆ ಕಾಯ್ದೆ ಹಾಗೂ ಇತರ ಕಾನೂನು ಜಾರಿಗೆ ತಂದಿದ್ದು, ಇದರ ದುರ್ಬಳಕೆ ಆಗಬಾರದು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜೆ. ಹೇಳಿದರು.ಪಟ್ಟಣದ ಡಾ. ಬಾಬು ಜಗಜೀವನರಾಮ ಸಮುದಾಯ ಭವನದಲ್ಲಿ ಸೋಮವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಪಂ ಹಾಗೂ ಅಜೀಮ್ ಪ್ರೇಮ್ಜಿ ಫೌಂಡೇಶನ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸೊಸೆ ಅತ್ತೆಯನ್ನು ತಾಯಿಯಂತೆ ಕಾಣಬೇಕು. ಅತ್ತೆಯನ್ನು ಸೊಸೆ ಮಗಳಂತೆ ಕಾಣುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಂದಾಗ ಇಂತಹ ಆಚರಣೆಗಳಿಗೆ ಹೆಚ್ಚು ಅರ್ಥ ಬರುತ್ತದೆ ಎಂದರು.
ಈ ಹಿಂದೆ ಗಂಡ ತೀರಿ ಹೋದರೆ ಹೆಂಡತಿ ಚಿತೆಗೆ ಹಾರುತ್ತಿದ್ದಳು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಮಹಿಳೆಯರನ್ನು ಪುರುಷನಂತೆ ಸರಿಸಮಾನ ರೀತಿಯಲ್ಲಿ ಕಾಣಲಾಗುತ್ತಿದೆ. ಆಗ ಬಾಲ್ಯವಿವಾಹ ಮಾಡಿಕೊಡುವ ಕೆಟ್ಟ ಪದ್ಧತಿಯಿತ್ತು. ಇದೀಗ ಅಂತಹ ಪ್ರಕರಣ ತೀರಾ ಕಡಿಮೆ. ಹೆಣ್ಮುಕ್ಕಳನ್ನು ಗಂಡು ಮಗುವಿನಂತೆ ಪ್ರತಿಯೊಬ್ಬ ಪಾಲಕರು ಕಾಣಬೇಕು. ಇಬ್ಬರಿಗೂ ಸಮಾನ ರೀತಿಯಲ್ಲಿ ಶಿಕ್ಷಣ ಕೊಡಿಸಬೇಕು. ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕುರಲಿಲ್ಲ. ಇದೀಗ ಸಂವಿಧಾನದಡಿ ಆಸ್ತಿಯಲ್ಲೂ ಎಲ್ಲ ಹಕ್ಕು ನೀಡಿದೆ. ಇನ್ನೂ ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಎನ್ನುವುದನ್ನು ಮಹಿಳೆಯರು ಅರ್ಥೈಸಿಕೊಳ್ಳಬೇಕು. ಮಕ್ಕಳನ್ನು ಜಾಗ್ರತೆಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಮಾತನಾಡಿದರು. ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಬೆಟದೇಶ ಮಾಳೆಕೊಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಎಂದೂ ಅಬಲೆಯಲ್ಲ, ಆಕೆ ಸಬಲೆಯಾಗಿದ್ದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಸ್ಥಾನಮಾನ ಪಡೆಯಲು ಅರ್ಹಳಾಗಿದ್ದಾಳೆ ಎಂದು ಹೇಳಿದರು.
ಈ ವೇಳೆಯಲ್ಲಿ ಅಂಗನವಾಡಿಯ ೩ ವರ್ಷದ ಸಾವಿತ್ರಿ ಗೆದಗೇರಿ ಹಾಗೂ ಮುಧೋಳದ ಮಹೇಖ್ನಾಜ್ ಹಿರೇಮನಿ ಭಾರತದ ಸಂವಿಧಾನ ಪೀಠಿಕೆಯನ್ನು ಕಂಠಪಾಠದ ಮೂಲಕ ಪ್ರತಿಜ್ಞಾವಿಧಿ ಬೋಧಿಸಿ ಎಲ್ಲರ ಗಮನ ಸೆಳೆದರು.ಪಪಂ ಸದಸ್ಯೆ ಬಸಮ್ಮ ಬಣಕಾರ, ಪಪಂ ಸುಮಾ ಕಂಚಿ, ಬಿ.ಬಿ. ಕೊಳೂರ, ಎ.ಎಂ. ಪಾಟೀಲ, ಜ್ಯೋತಿ ಪಲ್ಲೇದ, ಎಎಸ್ಐ ಇಮಾಮಸಾಬ, ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಇದ್ದರು.