ಹೊಸಕೋಟೆ: ಪ್ರಸ್ತುತ ರಸ್ತೆಯ ಮೇಲ್ಭಾಗದಲ್ಲಿ ಕಾಣಿಸುತ್ತಿರುವ 11 ಕೆವಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಿ, ಭೂಗತ ಕೇಬಲ್ ವಿದ್ಯುತ್ ಸರಬರಾಜು ವ್ಯವಸ್ಥೆ ಕಲ್ಪಿಸಲಾಗುವುದು. ಯೋಜನೆ ಪೂರ್ಣಗೊಂಡ ಬಳಿಕ ಈ ಪ್ರದೇಶದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ತಾಲೂಕಿನ ದೊಡ್ಡದುನ್ನಸಂದ್ರ ಕ್ರಾಸ್ ಜಂಕ್ಷನ್ನಲ್ಲಿ 1 ಕೋಟಿ ವೆಚ್ಚದ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ ಮೂರು-ನಾಲ್ಕು ತಿಂಗಳಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿರಂತರ ನಡೆಯುತ್ತಿವೆ. ರಸ್ತೆ ಅಗಲೀಕರಣಗೊಳಿಸುವ ಉದ್ದೇಶದಿಂದ ರಸ್ತೆ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಪಂಚಾಯಿತಿ ಹಾಗೂ ಸರ್ಕಾರದ ಅನುದಾನದಡಿ ಸುಮಾರು 2 ಕೋಟಿ ವೆಚ್ಚದಲ್ಲಿ ಚರಂಡಿ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ರಸ್ತೆ ಬದಿಯಲ್ಲಿದ್ದ ಕೆಲವು ಹಳೆಯ ಹಾಗೂ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಅವುಗಳ ಬದಲಿಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ವಾಹನ ಸಂಚಾರ ಸುಗಮವಾಗಲಿದೆ ಎಂದರು.ದೊಡ್ಡ ದುನ್ನಸಂದ್ರ ವೃತ್ತ ನಾಲ್ಕು ರಸ್ತೆ ಸೇರುದ ಜಂಕ್ಷನ್ ಆಗಿದ್ದು ನಿತ್ಯ ಬಿಡುವಿಲ್ಲದ ವಾಹನಗಳ ಸಂಚಾರ ಇದೆ. ಇದರಿಂದ ಬೈಪಾಸ್ ರಸ್ತೆಗೆ ಜಾಗ ಗುರುತಿಸಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದು, ಭೂ ಸ್ವಾಧೀನ ಆದರೆ ರಸ್ತೆ ನಿರ್ಮಾಣ ಅನುದಾನ ಕೊಡಿಸುವ ಜವಾಬ್ದಾರಿ ನನ್ನದು. ಬೈಪಾಸ್ ರಸ್ತೆ ಆದರೆ ಜಂಕ್ಷನ್ನಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ ಎಂದರು.
ಬೆಸ್ಕಾಂ ಇಇ ವೆಂಕಟೇಶಪ್ಪ, ಎಇಇ ಪುಟ್ಟಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ, ಅನುಗೊಂಡನಹಳ್ಳಿ ಹೋಬಳಿ ಕಾಂಗ್ರೆಸ್ ಮುಖಂಡ ಭೋದನಹೊಸಹಳ್ಳಿ ಪ್ರಕಾಶ್, ಟಿಎಪಿಸಿಎಂಸ್ ಮಾಜಿ ಅಧ್ಯಕ್ಷ ಬಾಬುರೆಡ್ಡಿ, ಬಮುಲ್ ನಿರ್ದೇಶಕ ಕೆಎಂಎಫ್ ಮಂಜುನಾಥ್, ಬಿಎಂಆರ್ಡಿಎ ಮಾಜಿ ಅಧ್ಯಕ್ಷ ಟಿಕೆಆರ್ ಕೃಷ್ಣಾರೆಡ್ಡಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಡಿ.ಸಿ.ಲಕ್ಷ್ಮೀ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಇತರರು ಹಾಜರಿದ್ದರು.ಫೋಟೋ: 25 ಹೆಚ್ಎಸ್ಕೆ 1
ಹೊಸಕೋಟೆ ತಾಲೂಕಿನ ದೊಡ್ಡದುನ್ನಸಂದ್ರ ಕ್ರಾಸ್ನಲ್ಲಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.