ಸಾರಾಂಶ
ಶರಾವತಿ ಮುಳುಗಡೆಯ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿ ಅಧಿಕಾರಿಗಳು ಮೂಲ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಮಾನವೀಯತೆಯ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಶರಾವತಿ ಮುಳುಗಡೆಯ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿ ಅಧಿಕಾರಿಗಳು ಮೂಲ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಮಾನವೀಯತೆಯ ಆಧಾರದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು.ತಾಲೂಕಿನ ಹಣಗೆರೆಕಟ್ಟೆಯಲ್ಲಿ ಶುಕ್ರವಾರ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಸಂಬಂಧಿಸಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟಿನ ಆದೇಶ ಅಧಿಕಾರಿಗಳ ಕೈ ಬಲಪಡಿಸಿದೆ. ಅಂತಿಮವಾಗಿ ಜಿಲ್ಲಾಡಳಿತ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗದಂತೆ ನಿರ್ಣಯ ಕೈಗೊಳ್ಳಬೇಕಿದೆ ಎಂದರು.
ಹಳೆಯ ನಕ್ಷೆಯ ವ್ಯಾಪ್ತಿಯಲ್ಲಿ ಬರುವ ಯಾವ ರೈತರು ಕಾಡನ್ನು ಕಡಿದು ಜಮೀನು ಮಾಡಿದವರಲ್ಲಾ ಎಂಬುದನ್ನು ಗಮನಿಸಬೇಕಿದೆ. ಅಂದಿನ ಸರ್ಕಾರವೇ ಈ ರೈತರನ್ನು ತಂದು ಕೂರಿಸಿರುವುದು. ಹಿಂದಿನ ಸರ್ವೇ ಸ್ಕೆಚ್ಚಿನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಪ್ಪಿಗೆಯೂ ಸೂಚಿಸಿವೆ. ಈ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿ ನಾನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಮೂಲ ಸಂತ್ರಸ್ತರನ್ನು ಕೈಬಿಡದಂತೆ ನಿಗಾ ವಹಿಸಿ ಎಂದು ಹೇಳಿದರು.ಸಭೆಯಲ್ಲಿ ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದ ಕುಡಿಯುವ ನೀರಿನ ಸೌಲಭ್ಯ, ಸರತಿ ಸಾಲು ನಿರ್ಮಾಣದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತಂತೆ ಚರ್ಚಿಸಲಾಯಿತು.
ಹಣಗೆರೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ, ತಹಸೀಲ್ದಾರ್ ಎಸ್.ರಂಜಿತ್, ಹಣಗೆರೆಕಟ್ಟೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಸಿರಿಗೆರೆ ವಲಯ ವನ್ಯಜೀವಿ ವಿಭಾಗದ ಅಧಿಕಾರಿ ಸೇರಿದಂತೆ ಮುಳುಗಡೆ ಸಂತ್ರಸ್ತರು ಇದ್ದರು.