ಫಲಿತಾಂಶ ಸುಧಾರಣೆಗೆ ಕಾರ್ಯಪ್ರವೃತರಾಗಿ

| Published : Jul 17 2025, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಯೂ ಕುಸಿತ ಕಂಡಿದ್ದು, ಈ ವರ್ಷ ಆರಂಭದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿ ವರ್ಗ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಪ್ರವೃತರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಸಹನಿರ್ದೇಶಕಿ ಮಂಗಲಾ ನಾಯಕ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆಯೂ ಕುಸಿತ ಕಂಡಿದ್ದು, ಈ ವರ್ಷ ಆರಂಭದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿ ವರ್ಗ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಕಾರ್ಯಪ್ರವೃತರಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಸಹನಿರ್ದೇಶಕಿ ಮಂಗಲಾ ನಾಯಕ ಕರೆ ನೀಡಿದರು.

ತಾಲ್ಲೂಕಿನ ಇಟ್ಟಂಗಿಹಾಳದ ವೇದ ಅಕಾಡೆಮಿ ಶಿಕ್ಷಣ ಸಂಸ್ಥೆಯಲ್ಲಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಆಯೋಜಿಸಲಾಗಿದ್ದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಅವರು ಮಾತನಾಡಿದರು. ನಕಲು ಮುಕ್ತ ಪರೀಕ್ಷೆ ನಡೆಯುವದರೊಂದಿಗೆ ಜಿಲ್ಲೆಯೂ ಟಾಪ್ ಹತ್ತರ ಫಲಿತಾಂಶದಲ್ಲಿ ಸ್ಥಾನ ಪಡೆದುಕೊಳ್ಳಬೇಕು. ಕಠಿಣ ವಿಷಯಗಳ ಕುರಿತು ವಿಶೇಷ ತರಗತಿಗಳನ್ನು ಶೈಕ್ಷಣಿಕ ವರ್ಷ ಆರಂಭದಿಂದಲೇ ಆರಂಭಿಸಬೇಕು. ಅಂದಿನ ಪಾಠದ ಕಠಿಣತೆ ಕುರಿತು ಅಂದೇ ವಿಶೇಷ ತರಗತಿ ನಡೆಸಬೇಕು, ಮಕ್ಕಳಿಗೆ ಅಜೀಂ ಪ್ರೇಮಜಿ ಫೌಂಡೇಶನ್‌ ವತಿಯಿಂದ ರಚಿಸಿದ ಗಣಿತ ಮತ್ತು ಕನ್ನಡ ಪುಸ್ತಕಗಳ ಕಲಿಕಾ ಸಾಧನವನ್ನು ಶಾಲೆಯಲ್ಲಿ ಬಳಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಶಾಲೆಯಲ್ಲಿ ಎಲ್ಲ ಶಿಕ್ಷಕರಿಗೆ ಮೇಲಿಂದ ಮೇಲೆ ಇಪ್ಪತ್ತು ಅಂಶಗಳ ಚಟುವಟಿಕೆಗಳ ಕುರಿತು ಸಭೆಗಳನ್ನು ಮಾಡುವದರ ಮೂಲಕ ಮೇಲ್ವಿಚಾರಣೆ ಮಾಡಿ ಕಲಿಕಾ ವಾತಾವರಣ ನಿರ್ಮಿಸಬೇಕು ಎಂದು ಸೂಚಿಸಿದರು.

ಡಿಡಿಪಿಐ (ಆಡಳಿತ) ಟಿ.ಎಸ್.ಕೋಲಾರ ಮಾತನಾಡಿ, ವಿಷಯವಾರು ಕಠಿಣ ಅಂಶಗಳನ್ನು ಪಟ್ಟಿ ಮಾಡಿಕೊಂಡು ಮಕ್ಕಳಿಗೆ ಹೆಚ್ಚು ಒತ್ತು ಕೊಟ್ಟು ಅರ್ಥವಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಡಿಡಿಪಿಐ ಉಮಾದೇವಿ ಸೊನ್ನದ ಮಾತನಾಡಿ, ನಮ್ಮೆಲ್ಲರಿಗೂ ಇಲಾಖೆಯ ಆದೇಶಗಳನ್ನು, ನಿರ್ದೇಶನಗಳನ್ನು ಹೇಳುವುದೆಲ್ಲ ಮುಗಿದಿದೆ. ಇವೆಲ್ಲವುಗಳನ್ನು ಮುಖ್ಯೋಪಾಧ್ಯಾಯರು ಶಾಲೆಯಲ್ಲಿ ಅನುಷ್ಠಾನ ಮಾಡಬೇಕು. ಅದು ಈ ವರ್ಷ ಪರಿಣಾಮಕಾರಿಯಾಗಿ ಮಾಡಬೇಕು. ನಮ್ಮ ಡಯಟ್ ವತಿಯಿಂದ ಪ್ರಶ್ನೆ ಪತ್ರಿಕೆ ರಚನೆ, ದತ್ತು ಶಾಲೆ ಅನುಷ್ಠಾನ, ತರಬೇತಿಗಳನ್ನು ಹಮ್ಮಿಕೊಂಡು ಫಲಿತಾಂಶ ಸುಧಾರಣೆ ಮಾಡೋಣ ಎಂದು ಹೇಳಿದರು.

ಬಿಇಒ ಪಿ.ಎಸ್.ಬಳೋಲಮಟ್ಟಿ ಮಾತನಾಡಿ, ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ತರಗತಿ, ರಸಪ್ರಶ್ನೆ, ಗುಂಪು ಚರ್ಚೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಚಟುವಟಿಕೆ, ಘಟಕ ಪರೀಕ್ಷೆ ತೆಗೆದುಕೊಂಡು ದಾಖಲೀಕರಣ ಮಾಡುವುದು ಕಡ್ಡಾಯ, ದತ್ತು ಮಕ್ಕಳನ್ನು ಪಡೆದು ಅವರಿಗೆ ಚಟುವಟಿಕೆ ಕೊಡುವುದು, ಮಕ್ಕಳಿಗೆ ಆಟಗಳನ್ನು ಆಡಿಸಿ ಹುರಿದುಂಬಿಸಿ ಮಕ್ಕಳು ಓದುವಂತೆ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ನಾರಾಯಣ ಬಾಬಾನಗರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೋಸಲಗಿ, ಮುಖ್ಯೋಪಾಧ್ಯಾಯ ಮಾಧವ ಪ್ರಸಾದ ಕುಲಕರ್ಣಿ, ಪ್ರಭು ಬಿರಾದಾರ, ವಸಂತ ಚವ್ಹಾಣ, ಜಿ.ಟಿ.ಕಾಗವಾಡ ಮುಂತಾದವರು ಈ ವೇಳೆ ಹಾಜರಿದ್ದರು.