ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯ ಪ್ರಾಥಮಿಕ ಸಹಕಾರ ಸಂಘಗಳ ಸುಸ್ಥಿರತೆಗೆ ಎಲ್ಲರೂ ಶ್ರಮಿಸುವಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಕೃಷಿಕರ ಬೆನ್ನುಲುಬಾಗಿದ್ದು, ಸಹಕಾರ ಸಂಘಗಳನ್ನು ಪ್ರತಿಯೊಬ್ಬರೂ ಬಲಪಡಿಸಲು ಮುಂದಾಗಬೇಕು. ಸಹಕಾರ ಸಂಘಗಳು ಉಳಿದಲ್ಲಿ ಕೃಷಿಕರಿಗೆ ಸಹಕಾರಿಯಾಗಲಿದೆ ಎಂದರು.ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಲು ಅವಕಾಶವಿದ್ದು, ಅಗತ್ಯ ಇದ್ದಲ್ಲಿ ಈ ಸಂಬಂಧ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಲು ಸೂಕ್ತ ಕ್ರಿಯಾಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 74 ಸೇವಾ ಸಹಕಾರ ಸಂಘಗಳಿದ್ದು, ಅದರಲ್ಲಿ 4 ಪ್ರಾಥಮಿಕ ಸೇವಾ ಸಹಕಾರ ಸಂಘಗಳು ನಷ್ಟದಲ್ಲಿರುವ ಬಗ್ಗೆ ಮಾಹಿತಿ ಇದೆ. ಆದ್ದರಿಂದ ಅಂತಹ ಪ್ರಾಥಮಿಕ ಸೇವಾ ಸಹಕಾರ ಸಂಘಗಳನ್ನು ಲಾಭದಲ್ಲಿ ನಡೆಸುವಂತಾಗಲು ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ರಾಜಣ್ಣ ಮಾಡಿದರು.ಕೊಡಗಿನಂತಹ ಜಿಲ್ಲೆಯಲ್ಲಿ ಕೆಲವೊಂದು ಸಹಕಾರ ಸಂಘಗಳು ನಷ್ಟದಲ್ಲಿ ಇರುವುದು ಬೇಸರದ ಸಂಗತಿ. ಆದ್ದರಿಂದ ನಷ್ಟದಲ್ಲಿರುವ ಸಹಕಾರ ಸಂಘಗಳನ್ನು ಬಲಪಡಿಸಲು ಮುಂದಾಗಬೇಕಿದೆ ಎಂದು ಸಚಿವರು ನಿರ್ದೇಶನ ನೀಡಿದರು.
ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಸಹಕಾರ ಸಂಘಗಳ ಸಹಾಯಕ ನಿಬಂಧಕರು ನ್ಯಾಯಾಲಯದಲ್ಲಿರುವ ದಾವೆ ಹಾಗೂ ಹಣ ದುರುಪಯೋಗ ಪ್ರಕರಣಗಳನ್ನು ಶೀಘ್ರ ನಿಯಮಾನುಸಾರ ಇತ್ಯರ್ಥ ಪಡಿಸಬೇಕು. ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಸಮಾಪನಾ ಸಹಕಾರ ಸಂಘಗಳ ಪುನಃಶ್ಚೇತನಕ್ಕೆ ಅಗತ್ಯ ಕ್ರಮವಹಿಸುವಂತೆ ರಾಜಣ್ಣ ಸೂಚಿಸಿದರು.ಸಹಕಾರ ಸಂಘಗಳು ಕ್ಷೇಮನಿಧಿ ಸೇರಿದಂತೆ ಇತರೆ ಬ್ಯಾಂಕುಗಳಲ್ಲಿ ಠೇವಣಿ ಮಾಡದೆ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಬ್ಯಾಂಕುಗಳು ಇಂದಿನ ಕಾಲದಲ್ಲಿ ಶೇ.50 ರಷ್ಟು ಕೃಷಿಯೇತರ ಸಾಲ ನೀಡಿ ಲಾಭ ಗಳಿಸುವತ್ತ ಗಮನಹರಿಸಿ ತಮ್ಮ ದೃಢತೆ ಕಾಯ್ದುಕೊಳ್ಳಲು ಸೂಚಿಸಿದರು. ನಬಾರ್ಡ್ನಿಂದ ರಿಯಾಯಿತಿ ಬಡ್ಡಿದರದಲ್ಲಿ ನೀಡಲ್ಪಡುತ್ತಿದ್ದ ಅಲ್ಪಾವಧಿ ಕೃಷಿ ಸಾಲದ ಪ್ರಮಾಣ ಕಡಿತಗೊಳಿಸಿರುವ ಬಗ್ಗೆ ಮನವರಿಕೆ ಮಾಡಿದರು.ಸಹಕಾರ ಸಂಘಗಳ ಲೆಕ್ಕಪರಿಶೋಧನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯ ಮೂರು ಪಿಕಾರ್ಡ್ ಬ್ಯಾಂಕುಗಳಲ್ಲಿನ ಸಾಲ ವಿತರಣೆ ಹಾಗೂ ಇತರೆ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲಿಸಿದರು.ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ನಿಗದಿತ ದರವನ್ನು ಕಾಲಮಿತಿಯಲ್ಲಿ ಪಾವತಿಸಲು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗದೆ ಇರುವ ಹಾಲು ಉತ್ಪಾದಕರನ್ನು ಸಂಬಂಧಿಸಿದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೊಂದಾಯಿಸಲು ಕ್ರಮವಹಿಸುವಂತೆ ಸಚಿವರು ಸೂಚಿಸಿದರು.
ಸಹಕಾರ ಇಲಾಖೆಯೊಂದಿಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಅವರು ಸಮನ್ವಯ ಸಾಧಿಸಿ ಸಹಕಾರ ಇಲಾಖೆಯ ಕಾರ್ಯಕ್ರಮಗಳು, ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಡುವಂತೆ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಿಬ್ಬಂದಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದರು.ಕೊಡಗು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುಂಡಂಡ ಸಿ. ನಾಣಯ್ಯ, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಎಸ್.ರಮಣ ರೆಡ್ಡಿ, ಬೆಂಗಳೂರು ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜು.ಸಿ.ಎನ್., ಸಹಕಾರ ಸಂಘಗಳ ಅಪರ ನಿಬಂಧಕರಾದ(ಪತ್ರು) ಬಾಲಶೇಖರ್ ಎಚ್., ಕೊಡಗು ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ನಾಯಕ್, ಸಹಕಾರ ಸಂಘಗಳ ಉಪ ನಿಬಂಧಕರಾದ ವಿಜಯಕುಮಾರ್.ಜಿ.ಆರ್, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕ ಹೇಮಾವತಿ, ಸಹಕಾರ ಸಂಘಗಳ ಉಪ ವಿಭಾಗದ ಸಹಾಯಕ ನಿಬಂಧಕ ಶೈಲಜಾ, ಸಹಕಾರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಆರ್.ಎಸ್.ರೇಣುಕಾ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಯೋಗೇಂದ್ರ ನಾಯಕ್, ಡಿಸಿಸಿ ಬ್ಯಾಂಕಿನ ಮಹಾಪ್ರಬಂಧಕಾದ ಭೋಜಮ್ಮ, ಕೊಡಗು ಕಾಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರು, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕರು ಇತರರು ಇದ್ದರು.