ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ದೇಶದ ಯಾವುದೇ ರಾಜ್ಯಗಳು ಕಟ್ಟಡ ಕಾರ್ಮಿಕರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಯಾವುದೇ ಕಾರಣಕ್ಕೂ ಅನ್ಯ ಯೋಜನೆಗಳಿಗೆ ಬಳಸದೆ ಕಟ್ಟಡ ಕಾರ್ಮಿಕರ ಅಭಿವೃದ್ಧಿಗಾಗಿ ಮಾತ್ರ ಬಳಸಬೇಕು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಗ್ರಹಿಸಿದರು.ಗುರುವಾರ ಕಟ್ಟಡ ಕಾರ್ಮಿಕರ ಬೇಡಿಕೆ ದಿನದ ಅಂಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ 1996 ರಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ಈ ಕಾಯ್ದೆ ಕಾರ್ಮಿಕರ ವಿರುದ್ಧವಾಗಿ ತಿದ್ದಪಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗಾಗಿ ಮೀಸಲಿಟ್ಟಿರುವ ಹಣವನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ಅನ್ಯ ಯೋಜನೆಗಳಿಗೆ ಬಳಸಬಾರದು. 1996ರ ಮೂಲ ಸೆಸ್ ಕಾಯ್ದೆ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಇರುವ 1 ಪರ್ಸೆಂಟ್ ಸಸ್ ಅನ್ನು 2 ಪರ್ಸೆಂಟ್ಗೆ ಹೆಚ್ಚಳ ಮಾಡಬೇಕು. ಹೆಚ್ಚಳ ಮಾಡಿದ ಸೆಸ್ ಹಣವನ್ನು ಕಾರ್ಮಿಕರ ಯೋಗಕ್ಷೇಮಕ್ಕೆ ಗಣನೀಯವಾಗಿ ಆರ್ಥಿಕ ಬೆಂಬಲ ವೃದ್ಧಿಸಲು ಬಳಕೆಯಾಗಬೇಕು ಎಂದರು.ಖಾಸಗಿ ಸೆಸ್ 10 ಲಕ್ಷ, ವಾಣಿಜ್ಯ ಸೆಸ್ 5 ಲಕ್ಷ ಸೆಸ್ ಸಂಗ್ರಹದ ಮಿತಿಯನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು ಮತ್ತು ಒಳಾಂಗಣ ಅಲಂಕಾರಕ್ಕೂ ಸೆಸ್ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ರಾಜ್ಯಗಳು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾನೂನನ್ನು ಮತ್ತು ಸೌಲಭ್ಯಗಳನ್ನು ಸಮಾನ ರೀತಿಯಲ್ಲಿ ವಿತರಿಸಬೇಕು ಎಂದರು.ರಾಜ್ಯ ಮಂಡಳಿ ಸದಸ್ಯ ಗೋವಿಂದರಾಜು ಮಾತನಾಡಿ, ಈಗ ನಮ್ಮ ರಾಜ್ಯದಲ್ಲಿರುವ ತಿಂಗಳ 3 ಸಾವಿರ ಪಿಂಚಣಿಯನ್ನು ಕನಿಷ್ಠ 6 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಕಾರ್ಮಿಕ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಮ್ಮ ಸಂಘಟನೆಯ ಸದಸ್ಯರನ್ನು ಎಲ್ಲಾ ರಾಜ್ಯದಲ್ಲಿ ಮಂಡಳಿ ಸದಸ್ಯರನ್ನಾಗಿ ನೇಮಿಸುವುದು. ಹಾಗೂ ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಹೆಣ್ಣು-ಗಂಡು ಎಂಬ ಬೇದ-ಭಾವವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಸುತ್ತಿದ್ದ ಕಟ್ಟಡ ಕಾರ್ಮಿಕರ ಹೋರಾಟದ ಸ್ಥಳಕ್ಕೆ ಬಂದಿದ್ದ ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಅವರಿಗೆ ಕಾರ್ಮಿಕರು ಕಾರ್ಡ್ಗಳನ್ನು ನೋಂದಾಯಿಸಿದ ಹಲವು ದಿನಗಳ ನಂತರ ರದ್ದಾಗುತ್ತಿರುವ ವಿಷಯವನ್ನು ಸ್ವತಃ ಕಾರ್ಮಿಕರೇ ತಮ್ಮ ಸಮಸ್ಯೆಯನ್ನು ಬಗೆಹರಿಸಿ ಎಂದು ಕೇಳಿದಾಗ ಅವರು ಉತ್ತರಿಸಿದೆ ಹೋದರು ಎಂದು ದೂರಿದರು.ಜಿಲ್ಲಾ ಖಜಾಂಚಿ ಅಶ್ವತ್ಥನಾರಾಯಣ ಮಾತನಾಡಿ, ಕಟ್ಟಡ ಕಾರ್ಮಿಕರ ಮಂಡಳಿಯನ್ನು ಕಾರ್ಮಿಕ ಕಾನೂನುಗಳು ತಿದ್ದುಪಡಿಯಾಗಿರುವ 4 ಕೋಡ್ಗಳಿಗೆ ವಿಲೀನ ಮಾಡಬಾರದು ಎಂದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಚಂದ್ರಶೇಖರ್, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಧುಗಿರಿ ಗೋವಿಂದಪ್ಪ, ಶಿರಾ ತಾಲೂಕಿನ ಓಬಳರಂಗಯ್ಯ, ಕುಪ್ಪೂರು ನರಸಿಂಹಯ್ಯ, ಸುರೇನಹಳ್ಳಿ ರಸೂಲ್ಸಾಬ್, ಮಂಜುನಾಥ್, ತೋವಿನಕೆರೆ ಯುವ ಮುಖಂಡ ಗೋವಿಂದರಾಜು ಮುಂತಾದವರು ನೇತೃತ್ವ ವಹಿಸಿದ್ದರು.