ಕಾರ್ಮಿಕರೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಸಚಿನ್ ಕುಮಾರ್ ಶಿವಪೂಜಿ

| Published : Oct 16 2024, 12:30 AM IST / Updated: Oct 16 2024, 12:31 AM IST

ಕಾರ್ಮಿಕರೇ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಸಚಿನ್ ಕುಮಾರ್ ಶಿವಪೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಮಿಕರಿಗೆ ಸಮಾನತೆ ಜೊತೆಗೆ ರಕ್ಷಣೆ ನೀಡಬೇಕೆಂಬ ಉದ್ದೇಶದಿಂದ ಹಲವಾರು ಕಾಯ್ದೆ ಜಾರಿಗೆ ತರಲಾಯಿತು. ಕೆಲಸಕ್ಕೆ ತಕ್ಕ ಕೂಲಿ, ಸಮಯ ನಿಗಧಿ, ವಾರಕ್ಕೆ ಒಂದು ದಿನ ರಜೆ, ವೈದ್ಯಕೀಯ ವೆಚ್ಚ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯ ನೀಡಲಾಗಿದೆ. ಕಾರ್ಮಿಕರು ಕಾಯ್ದೆಯ ಬಗ್ಗೆ ತಿಳಿವಳಿಕೆ ಪಡೆದು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸತ್ಪ್ರಜೆಯಾಗಿ ರೂಪಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್‌ಕುಮಾರ್ ಶಿವಪೂಜಿ ಕರೆ ನೀಡಿದರು.

ಪಟ್ಟಣದ ಶಿಕ್ಷಕರ ಕಲಿಕಾ ಕೇಂದ್ರ ಕೋಟೆ ಶಾಲೆಯಲ್ಲಿ ತಾಲೂಕು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ನಡೆದ ಕಾರ್ಮಿಕ ಕಾಯ್ದೆಗಳು, ಯೋಜನೆಗಳು ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರಿಗಾಗಿ ಇರುವ ಯೋಜನೆಗಳು ಹಾಗೂ ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ಈ ಹಿಂದೆ ಮಾಲೀಕರು ಹೆಚ್ಚು ಕೆಲಸ ಮಾಡಿಕೊಂಡು ಕಡಿಮೆ ಕೂಲಿ ಜೊತೆಗೆ ನಿರಂತರವಾಗಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದರು ಎಂದರು.

ಕಾರ್ಮಿಕರಿಗೆ ಸಮಾನತೆ ಜೊತೆಗೆ ರಕ್ಷಣೆ ನೀಡಬೇಕೆಂಬ ಉದ್ದೇಶದಿಂದ ಹಲವಾರು ಕಾಯ್ದೆ ಜಾರಿಗೆ ತರಲಾಯಿತು. ಕೆಲಸಕ್ಕೆ ತಕ್ಕ ಕೂಲಿ, ಸಮಯ ನಿಗಧಿ, ವಾರಕ್ಕೆ ಒಂದು ದಿನ ರಜೆ, ವೈದ್ಯಕೀಯ ವೆಚ್ಚ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯ ನೀಡಲಾಗಿದೆ. ಕಾರ್ಮಿಕರು ಕಾಯ್ದೆಯ ಬಗ್ಗೆ ತಿಳಿವಳಿಕೆ ಪಡೆದು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು.

ಮಂಡ್ಯ ಉಪವಿಭಾಗದ ಕಾರ್ಮಿಕ ಅಧಿಕಾರಿ ಸುಭಾಷ್ ಎಂ.ಆಲದಕಟ್ಟಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಹಲವಾರು ಯೋಜನೆ ನೀಡಲಾಗುತ್ತಿದೆ. ಸೌಲಭ್ಯ ಪಡೆದುಕೊಳ್ಳಬೇಕೆಂದರು.

18 ರಿಂದ 60 ವಯಸ್ಸಿನ ಹೊಂದಿರುವವರು ಕನಿಷ್ಠ ಮೂರು ತಿಂಗಳು ಉದ್ಯೋಗ ಮಾಡಿರುವ ಬಗ್ಗೆ ಪ್ರಮಾಣ ಪತ್ರದೊಂದಿಗೆ ಕಾರ್ಮಿಕರು ನೋಂದಾಯಿಸಿಕೊಳ್ಳಬೇಕಿದೆ. ಅರ್ಹ ಫಲಾನುಭವಿಗಳಿಗೆ ವಿವಿಧ ಕಾಯಿಲೆಗಳ ಶಸ್ತ್ರ ಚಿಕಿತ್ಸೆಗೆ 2 ಲಕ್ಷ ರು. ಒಳರೋಗಿಗಳಾಗಿ ದಾಖಲಾಗಿದ್ದಲ್ಲಿ 2 ಸಾವಿರ ರು. ಚಿಕಿತ್ಸಾ ವೆಚ್ಚ, ಅಪಘಾತದಲ್ಲಿ ಮೃತರಾದರೇ 2 ಲಕ್ಷ , ಶಾಶ್ವತ ಅಂಗವಿಕಲತೆ ಹೊಂದಿದರೆ 1 ಲಕ್ಷದವರೆಗೆ ಪರಿಹಾರ ಸಿಗಲಿದೆ ಎಂದರು.

ಕಾರ್ಮಿಕರು ಈ ದೇಶದ ಆಸ್ತಿ. ದುಶ್ಚಟಗಳಿಂದ ದೂರವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು. ಕಾರ್ಮಿಕ ಇಲಾಖೆ ನೀಡುವ ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿವಳಿಕೆ ನೀಡಿದರು.

ಇದೇ ವೇಳೆ ಕಾರ್ಮಿಕರಿಗೆ ಎಲೆಕ್ಟ್ರಿಷಿಯನ್ ಕಿಟ್‌ಗಳು ಹಾಗೂ ಮದುವೆ ಸಹಾಯ ಧನದ ಬಾಂಡ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ನಿರೀಕ್ಷಕರಾದ ಸಿ.ಅನಿತಾ, ಸಹಾಯಕ ಸರ್ಕಾರಿ ಅಭಿಯೋಜಕ ಶಂಕರಸ್ವಾಮಿ, ಕಾರ್ಯದರ್ಶಿ ನಟೇಶ್, ಅಪರ ಸರ್ಕಾರಿ ವಕೀಲ ಶ್ರೀಕಂಠಸ್ವಾಮಿ ಸೇರಿದಂತೆ ಇತರರು ಇದ್ದರು.