ರಾಜ್ಯ ಸರ್ಕಾರದ ಕಾವೇರಿ ತಂತ್ರಾಂಶದ ಮೂಲಕ ಜಾರಿಗೆ ತಂದಿರುವ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯ ತಂತ್ರಾಂಶವನ್ನು ಸರಿಯಾಗಿ ಅಭಿವೃದ್ಧಿಪಡಿಸಿ ಜಾರಿಗೆ ತರಬೇಕು. ಇಲ್ಲದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರ ಒಕ್ಕೂಟದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಎನ್. ನವೀನ್ ಕುಮಾರ್ ಸರ್ಕಾರವನ್ನು ಎಚ್ಚರಿಸಿದರು.
ರಾಜ್ಯದಲ್ಲಿಯೇ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಾರಿಯಾಗಿದ್ದ ವ್ಯವಸ್ಥೆ । ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಉಗ್ರ ಹೋರಾಟ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಸರ್ಕಾರದ ಕಾವೇರಿ ತಂತ್ರಾಂಶದ ಮೂಲಕ ಜಾರಿಗೆ ತಂದಿರುವ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯ ತಂತ್ರಾಂಶವನ್ನು ಸರಿಯಾಗಿ ಅಭಿವೃದ್ಧಿಪಡಿಸಿ ಜಾರಿಗೆ ತರಬೇಕು. ಇಲ್ಲದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರ ಒಕ್ಕೂಟದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಎನ್. ನವೀನ್ ಕುಮಾರ್ ಸರ್ಕಾರವನ್ನು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯ ತಾಂತ್ರಿಕ ಲೋಪದೋಷಗಳಿಂದ ಕೂಡಿದೆ. ಇದನ್ನು ಸರಿಪಡಿಸುವಂತೆ ಕಂದಾಯ ಸಚಿವರು, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗುತ್ತದೆ. ಕಾನೂನು ಹೋರಾಟವನ್ನು ಮಾಡಲಾಗುವುದು. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯದ ಪರವಾನಗಿ ಪಡೆದ ಪತ್ರ ಬರಹಗಾರರು ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯಲ್ಲಿ ಆಸ್ತಿ ನೋಂದಣಿ ವೇಳೆ ಸರ್ವರ್ ಡೌನ್ ಆಗುವುದು, ದಾಖಲೆಗಳು ಅಪ್ಲೋಡ್ ಆಗದಿರುವುದು ಮತ್ತು ಹಾರ್ಡ್ಕಾಪಿ ಪ್ರತಿಗಳು ಸಿಗದಿರುವ ಸಮಸ್ಯೆಗಳಿದ್ದು, ಇದರಿಂದಾಗಿ ಪತ್ರಗಳಿಗೆ ಕ್ರಯದಾರರು, ಪಕ್ಷದಾರರ ಹಸ್ತಾಕ್ಷರದ ರುಜುಗಳು ಇಲ್ಲದಿರುವುದರಿಂದ ಅವರುಗಳಿಗೆ ಪತ್ರದಲ್ಲಿ ಏನು ಬರೆದಿದೆ, ಏನು ವ್ಯವಹಾರ ಎಂಬುದು ಸಹ ಗಮನಕ್ಕೆ ಬಾರದೆ ನೋಂದಣಿ ಆಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರಿಗೆ ಮೋಸವೇ ಹೆಚ್ಚಾಗಿರುತ್ತದೆ. ಅಲ್ಲದೆ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಪ್ರಾಯೋಗಿಕವಾಗಿ ಈಗ ಸರ್ಕಾರವು ಕಾವೇರಿ ತಂತ್ರಾಶದಡಿ ಪೇಪರ್ಲೆಸ್ ನೋಂದಣಿ ಕಾರ್ಯವನ್ನು ಯಶಸ್ವಿಯಾಗಿದೆ ಎಂದು ತೋರಿಸುವ ಸಲುವಾಗಿ ನೋಂದಣಿ ಕಾರ್ಯವನ್ನು ರಾಜ್ಯದ ಅತಿ ಹಿಂದುಳಿದ ಹಾಗೂ ಅತಿ ಕಡಿಮೆ ದಸ್ತಾವೇಜುಗಳು ನೋಂದಣಿ ಆಗುವ ಜಿಲ್ಲೆಯಾದ ಚಾಮರಾಜನಗರವನ್ನು ಆಯ್ಕೆ ಮಾಡಿಕೊಂಡು ಯಶಸ್ವಿ ಎಂದು ಜಾರಿಗೆ ತರಲು ಮುಂದಾಗಿರುವುದು ದುರಂತ. ಈಗ ಪೇಪರ್ಲೆಸ್ ಎಂದು ಜಾರಿಗೆ ತಂದಿರುವ ಈ ವ್ಯವಸ್ಥೆಯಲ್ಲಿ ಅಂದರೆ ಆಸ್ತಿ ಮಾರಾಟ ಮಾಡುವವರು ಭೌತಿಕ ಸಹಿ ಮಾಡಬೇಕಾಗಿರುವುದಲ್ಲ. ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಆಸ್ತಿ ಖರೀದಿ ಮಾಡುವವರು ಭೌತಿಕ ಸಹಿ ಮಾಡಬೇಕಾಗಿರುವುದಿಲ್ಲ. ಈ ವ್ಯವಹಾರದಲ್ಲಿ ಹಾಜರಿದ್ದ ಸಾಕ್ಷಿದಾರರು ಭೌತಿಕ ಸಹಿ ಮಾಡಬೇಕಾಗಿರುವುದಿಲ್ಲ. ನಂತರ ದಸ್ತಾವೇಜು ನೋಂದಣಿ ಆಗುವ ಸಮಯದಲ್ಲಿ ಪಕ್ಷಕಾರರನ್ನು ಗುರುತಿಸುವವರು ಭೌತಿಕ ಸಹಿ ಮಾಡಬೇಕಾಗಿರುವುದಿಲ್ಲ. ಈ ಎಲ್ಲಾ ವ್ಯವಹಾರವನ್ನು ಗ್ರಹಿಸಿ ದಸ್ತಾವೇಜು ತಯಾರಿಸಿದವರು ಸಹ ಭೌತಿಕವಾಗಿ ಅಥವಾ ವಿದ್ಯುನ್ಮಾನ ಸಹಿ ಮಾಡಬೇಕಾಗಿರುವುದಿಲ್ಲ. ಕೊನೆಯದಾಗಿ ದಸ್ತಾವೇಜು ನೋಂದಣಿ ಮಾಡಿದ ನೋಂದಣಿ ಅಧಿಕಾರಿಗಳು ಸಹ ಭೌತಿಕ ಸಹಿ ಮಾಡಬೇಕಾಗಿರುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ಮೋಸ ಆಗುತ್ತದೆ. ಹಾಗಾಗಿ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯ ತಂತ್ರಾಂಶವನ್ನು ಸರಿಯಾಗಿ ಅಭಿವೃದ್ಧಿಪಡಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಒಕ್ಕೂಟದ ಧರ್ಮರಾಜ್ ವಿ. ಏಕಬೋಟೆ ಮಾತನಾಡಿ, ನೆರೆ ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲಿ ಕಾಗದರಹಿತ ಡಿಜಿಟಲ್ ನೋಂದಣಿ ವ್ಯವಸ್ಥೆಯನ್ನು ಸಾರ್ವಜನಿಕರು, ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರ ಉದ್ಯೋಗ ಭದ್ರತೆಗೆ ಅನುಕೂಲವಾಗುವಂತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಸಹ ಕಾರ್ಯದರ್ಶಿ ಕರಿಬಸಪ್ಪ ಬಳ್ಳಿ, ಖಜಾಂಚಿ ಡಿ.ಆರ್. ಗಿರಿರಾಜು, ಫಣೀಶ್, ಜಿಲ್ಲಾಧ್ಯಕ್ಷ ನಂದೀಶ್ವರ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹಾದೇವ ಸ್ವಾಮಿ ಕೋರಿಯರ್, ಖಜಾಂಚಿ ಹೊಮ್ಮ ರಾಮ ನಾಯಕ, ರವಿ, ಸೈಯದ್ ಮುಷಾವಿರ್ ಹಾಜರಿದ್ದರು.