ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸರ್ಕಾರದಿಂದ ವಿಶೇಷ ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ತಳಗವಾದಿ, ಕಲ್ಕುಣಿ, ಕಿರುಗಾವಲು, ವಡ್ಡರಹಳ್ಳಿ, ಅಣ್ಣೆಕೊಪ್ಪಲು, ಉಪ್ಪಲಗೇರಿಕೊಪ್ಪಲು, ಅವ್ವೇರಹಳ್ಳಿ, ಗಣಗನೂರು, ಮಾರ್ಕಾಲು, ಚಿಕ್ಕಮುಲಗೂಡು, ಅಣಸಾಲೆ, ದುಗ್ಗನಹಳ್ಳಿ, ಕಲ್ಲಾರೆಪುರ, ಮಾಗನೂರು, ತಳಗವಾದಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಎಸ್ಸಿಪಿ ಟಿಎಸ್ಪಿ ವಿಶೇಷ ಯೋಜನೆಯಡಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮಾತು ಕೊಟ್ಟು ತಪ್ಪಿಸಿಕೊಳ್ಳುವ ಜಯಮಾನ ನನ್ನದಲ್ಲ. ರಾಜಕೀಯ ಜೀವನದಲ್ಲಿ ಕೊಟ್ಟಿರುವ ಭರವಸೆ ಈಡೇರಿಸುತ್ತಾ ಬಂದಿದ್ದೇನೆ. ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪಕ್ಷ ಸಂಘಟನೆಗೂ ಒತ್ತು ನೀಡಲಾಗುತ್ತಿದೆ ಎಂದರು.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಜನತೆ ನೆಮ್ಮದಿಯಿಂದ ಬದುಕುವುದನ್ನು ಕಾಣುತ್ತಿದ್ದೇವೆ. ಹಳ್ಳಿಗಳಿಗೆ ಬೇಟಿ ಕೊಟ್ಟ ವೇಳೆ ಗ್ಯಾರಂಟಿ ಯೋಜನೆಯಿಂದ ಮನೆ ಬೆಳಗುತ್ತಿರುವ ಬಗ್ಗೆ ಮಹಿಳೆಯರು ಸಂತೋಷವನ್ನು ಹಂಚಿಕೊಂಡರು. ಬಡವರ ಪರ ಕಾಂಗ್ರೆಸ್ ಪಕ್ಷವಿದ್ದು, ನಿರಂತರವಾಗಿ ನೊಂದ ಜನರಿಗೆ ಆಸರೆಯಾಗಲಿದೆ ಎಂದರು.
ತಾಲೂಕಿನ ತಳಗವಾದಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಮುಖ್ಯರಸ್ತೆ ಮತ್ತು ಹೊಸ ರೋಡ್ ಅಭಿವೃದ್ಧಿ ಕಾಮಗಾರಿಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು. ಗ್ರಾಮದ ಜನರ ಬೇಡಿಕೆಯಂತೆ ರಸ್ತೆ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ದೊಡ್ಡಹಬ್ಬದ ವೇಳೆಗೆ ರಸ್ತೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.ಸರ್ಕಾರದಿಂದ ವಿಶೇಷ ಅನುದಾನ ತಂದು ತಾಲೂಕಿನ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದೇವೆ. ಗ್ರಾಮಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗುತ್ತಿದೆ. ನೀರಾವರಿ, ಶಿಕ್ಷಣ, ವಿದ್ಯುತ್, ರಸ್ತೆ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ವಿವಿಧ ಇಲಾಖೆಗಳಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್, ಸುಜಾಯ ಕೆಎಂ ಪುಟ್ಟು, ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು, ಮುಖಂಡರಾದ ವಿಶ್ವ, ಚೌಡಯ್ಯ, ಅಂಬರೀಷ್, ಮಾದನಾಯಕ್, ನಂಜುಂಡಸ್ವಾಮಿ, ಚಂದ್ರು, ಕೃಷ್ಣಮೂರ್ತಿ ಮಾರ್ಕಾಲು ಮಾಧು, ಚೇತನ್ ನಾಯಕ್ ಸೇರಿದಂತೆ ಇತರರು ಇದ್ದರು.