ಸಾರಾಂಶ
ಅರಣ್ಯ ಇಲಾಖೆಯ ಆರ್ಎಫ್ಒ ಕಿರಣ ಬಿ.ಎಂ. ಗಿಡ ನೆಟ್ಟು, ಲತಾ ಜಿ ಭಟ್ ನೀರು ಹಾಕುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು
ಕನ್ನಡಪ್ರಭ ವಾರ್ತೆ ಪುತ್ತೂರು
ಪ್ರಕೃತಿಯ ವೈಪರೀತ್ಯಗಳಿಗೆ ಮನುಷ್ಯನೇ ಕಾರಣರಾಗಿದ್ದು, ಪ್ರಕೃತಿಯ ಸಂರಕ್ಷಣಾ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕಾಗಿದೆ. ಕೇವಲ ನಮ್ಮ ಪ್ರಾಂತ್ಯದಲ್ಲಿ ಮಾತ್ರವಲ್ಲ. ಇಡೀ ಪ್ರಪಂಚದಲ್ಲಿ ಪರಿಸರ ರಕ್ಷಣೆಯಾಗಬೇಕು ಎಂದು ಪುತ್ತೂರಿನ ಅರಣ್ಯ ಸಂರಕ್ಷಣಾ ಅಧಿಕಾರಿ ಲತಾ ಜಿ. ಭಟ್ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಮನುಷ್ಯರು ತನ್ನ ಸ್ವಾರ್ಥದಿಂದ ಪ್ರಕೃತಿಯನ್ನು ದುರುಪಯೋಗಗೊಳಿಸುತ್ತಿದ್ದಾರೆ. ಇಂದಿನ ಪೀಳಿಗೆ ಅದನ್ನು ವಿರೋಧಿಸಬೇಕು, ಒಂದು ಮರ ಕಡಿದರೆ ನಾಲ್ಕು ಸಸಿಯನ್ನು ನೆಟ್ಟು ಪರಿಸರದ ರಕ್ಷಣೆಯನ್ನು ಮಾಡಬೇಕು ಎಂದರು.ಅರಣ್ಯ ಇಲಾಖೆಯ ಆರ್ಎಫ್ಒ ಕಿರಣ ಬಿ.ಎಂ. ಗಿಡ ನೆಟ್ಟು, ಲತಾ ಜಿ ಭಟ್ ನೀರು ಹಾಕುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ., ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಾನ್ವಿ ಸ್ವಾಗತಿಸಿದರು. ಅಕ್ಷಜ್ ರೈ ವಂದಿಸಿದರು. ಅದಿತಿ ಯು.ಎನ್ ನಿರೂಪಿಸಿದರು.