ಸಾರಾಂಶ
ಧಾರವಾಡ:
ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಇಲ್ಲಿಯ ಎಸ್ಡಿಎಂ ನಾರಾಯಣ ಹೃದಯಾಲಯದಿಂದ ಹೃದಯ ಆರೋಗ್ಯ ಹಾಗೂ ಹೃದಯಾಘಾತ ತಡೆಗಟ್ಟುವಿಕೆಯ ಮಹತ್ವ ತಿಳಿಸುವ ಉದ್ದೇಶದಿಂದ ಬೈಕಥಾನ್ ಯಶಸ್ವಿಯಾಗಿ ಜರುಗಿತು.ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಮತ್ತು ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಮುರುಗೇಶ್ ಚನ್ನಣ್ಣವರ್ ಚಾಲನೆ ನೀಡಿದರು. ಜಾಥಾ ಎಸ್ಡಿಎಂ ಆಸ್ಪತ್ರೆಯಿಂದ ಪ್ರಾರಂಭವಾಗಿ ಪಿ.ಬಿ. ರಸ್ತೆ, ಕೋರ್ಟ್ ಸರ್ಕಲ್, ಜೂಬಿಲಿ ಸರ್ಕಲ್ ಮತ್ತು ಕಾಲೇಜ್ ರಸ್ತೆಯ ಮೂಲಕ ಸಾಗಿ ಕರ್ನಾಟಕ ಕಾಲೇಜು ಮೈದಾನದಲ್ಲಿ ಅಂತ್ಯಗೊಂಡಿತು. ಸುಮಾರು 8.3 ಕಿ.ಮೀ ದೂರ ಜಾಥಾ ನಡೆದು 200ಕ್ಕೂ ಹೆಚ್ಚು ಬೈಕ್ ಸವಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಆಸ್ಪತ್ರೆಯ ಹಿರಿಯ ಹೃದಯ ರೋಗ ತಜ್ಞ ಡಾ. ರಘು ಪ್ರಸಾದ, ಆರೋಗ್ಯದ ಕಾಳಜಿ ವಹಿಸುವುದು ಸೂಕ್ತ. ಜತೆಗೆ ನಿಯಮಿತವಾಗಿ ತಪಾಸಣೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಅರವಳಿಕೆ ತಜ್ಞ ಡಾ. ಗಣೇಶ ನಾಯಕ್ ಮಾತನಾಡಿ, ಪ್ರತಿಯೊಬ್ಬರ ಜೀವನಶೈಲಿ ಚೆನ್ನಾಗಿರಬೇಕು. ಪ್ರತಿನಿತ್ಯ ಯೋಗ, ವ್ಯಾಯಾಮದಂತಹ ಚಟುವಟಿಕೆಯಲ್ಲಿ ನಿರತವಾಗಿರಬೇಕು ಎಂದರು.ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ, ವಿಶ್ವ ಹೃದಯ ದಿನಾಚರಣೆಯ ಮಹತ್ವ ತಿಳಿಸಿ ನಾರಾಯಣ ಹಾರ್ಟ್ ಸೆಂಟರ್ 16 ವರ್ಷದ ಸಾಧನೆ ಬಗ್ಗೆ ತಿಳಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೀರ್ತಿ ಪಿ.ಎಲ್, ಜಿ.ವಿ. ರಾಮನಗೌಡರ ಇದ್ದರು. ದುಂಡೇಶ ತಡಕೋಡ ನಿರೂಪಿಸಿದರು. ಅಜೇಯ ಹುಲಮನಿ ವಂದಿಸಿದರು.