ಉಡುಪಿ: ಇಲ್ಲಿನ ದೊಡ್ಡಣಗುಡ್ಡೆಯ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಮತ್ತು ಮಣಿಪಾಲದ ಮುನಿಯಾಲ ಆಯುರ್ವೇದ ಕಾಲೇಜುಗಳ ಆಯೋಜನೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಸ್ಪತ್ರೆಯ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ಗುರುವಾರ ಆಚರಿಸಲಾಯಿತು.

ದಿನದ ವಿಶೇಷವಾಗಿ ಆಸ್ಪತ್ರೆಯ ಸಿಬ್ಬಂದಿಗಳಿಗಾಗಿ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಮೊದಲು ಕಿರು ಸಭೆಯೊಂದಿಗೆ ಆರಂಭಗೊಂಡಿತು. ಸಭೆಯಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಪಿ.ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮುನಿಯಾಲ ಆಯುರ್ವೇದ ಕಾಲೇಜಿನ ಉಪನ್ಯಾಸಕರಾದ ಡಾ. ರಶ್ಮಿ ಕಲ್ಕೂರ, ಡಾ. ಮಾಧುರಿ, ಜ್ಯೋತ್ಸ್ನಾ, ಅಂತೆಯೇ ಆಸ್ಪತ್ರೆಯ ಮನೋ ವೈದ್ಯರಾದ ಡಾ ದೀಪಕ್ ಮಲ್ಯ, ವೈದ್ಯಾಧಿಕಾರಿಗಳಾದ ಡಾ. ಸುನೀಲ್ ಕುಮಾರ್, ಆಡಳಿತಾಧಿಕಾರಿಗಳಾದ ಸೌಜನ್ಯಾ ಶೆಟ್ಟಿ, ಯೋಗ ಶಿಕ್ಷಕರಾದ ಇಳಾ ಅವರು ಭಾಗವಹಿಸಿದ್ದರು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮದ ಆರಂಭವಾಯಿತು. ತದನಂತರ ಅಧ್ಯಕ್ಷೀಯ ನುಡಿಗಳನ್ನಾಡಿ ದಿನದ ಮಹತ್ವವನ್ನು ಮತ್ತು ನಿತ್ಯ ಜೀವನದಲ್ಲೂ ಯೋಗದ ಅಳವಡಿಕೆಯೊಂದಿಗೆ ಸ್ವಸ್ಥ ಜೀವನ ನಡೆಸಲು ಡಾ. ಪಿ. ವಿ ಭಂಡಾರಿಯವರು ತಿಳಿಸಿದರು.ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ಡಾ. ರಶ್ಮಿ ಕಲ್ಕೂರ ಇವರು ಮಾತನಾಡಿ ಕಾರ್ಯಕ್ರಮದ ಆಯೋಜನೆಯ ಬಗ್ಗೆ ತಿಳಿಸಿ ಸಂತಸ ವ್ಯಕ್ತ ಪಡಿಸಿದರು. ನಂತರ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ವಿತರಣೆಯೊಂದಿಗೆ ಸಭಾ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.ಮುಂದಿನ ಭಾಗವಾಗಿ ಮುನಿಯಾಲ ಆಯುರ್ವೇದ ಕಾಲೇಜಿನ ಯೋಗ ಉಪನ್ಯಾಸಕಿ ಜ್ಯೋತ್ಸ್ನ ಅವರು ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಇದರೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಭಾಗವಾದ ಈ ಕಾರ್ಯಕ್ರಮವು ಸುಗಮವಾಗಿ ಸಾಂಗವಾಯಿತು.