ಸಾರಾಂಶ
ಹೊಸಕೋಟೆ: ನಗರದ ಕೆ.ಆರ್. ರಸ್ತೆಯಲ್ಲಿರುವ ನಳಪಾಕ ಹೋಟೆಲ್ನಲ್ಲಿ ಗ್ರಾಹಕರೊಬ್ಬರು ಖರೀದಿಸಿದ ಗೋಬಿ ಮಂಚೂರಿಯಲ್ಲಿ ಹುಳು ಪತ್ತೆಯಾಗಿದ್ದು, ಮಾಲೀಕರ ಹಾಗೂ ಹೋಟೆಲ್ ವ್ಯವಸ್ಥಾಪಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ಪೂರ್ವ ತಾಲೂಕಿನ ಚೀಮಸಂದ್ರ ಗ್ರಾಮದ ತೇಜಸ್ವಿನಿ ಕುಟುಂಬ ಸಮೇತ ನಳಪಾಕ ಹೋಟೆಲ್ಗೆ ಆಗಮಿಸಿದ್ದರು. ಈ ವೇಳೆ ಗೋಬಿ ಮಂಚೂರಿ ಖರೀದಿಸಿ, ತಿನ್ನುವಾಗ ಹುಳು ಪತ್ತೆಯಾಗಿದ್ದಲ್ಲದೇ ಕಪ್ಪು ಬಣ್ಣದಿಂದ ಕೂಡಿರುವ ಗೋಬಿ ಮಂಚೂರಿ ಪತ್ತೆಯಾಗಿದೆ. ಗ್ರಾಹಕರಾದ ತೇಜಸ್ವಿನಿ ಅವರು ಮಾಲೀಕರ ಹಾಗೂ ವ್ಯವಸ್ಥಾಪಕರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡಿದ್ದಾರೆ, ಬೀದಿ ಬದಿ ೮೦ರು.ಗೆ ಸಿಗುವ ಗೋಬಿ ಮಂಚೂರಿಗೆ, ೧೯೦ ರು.ಕೊಟ್ಟು, ಗುಣಮಟ್ಟದ ಆಹಾರ ಲಭ್ಯತೆಯ ವಿಶ್ವಾಸವನ್ನು ಹೊಂದಿ ನಿಮ್ಮ ಹೋಟೆಲ್ ಗೆ ಬರುತ್ತೇವೆ. ಅದರೆ ನಿಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಹುಳು ಇರುವ ಗೋಬಿ ಮಂಚೂರಿ ಕೊಟ್ಟಿದ್ದೀರಾ. ಪುಟ್ಟ ಮಕ್ಕಳು ತಿಂದು ಆರೋಗ್ಯ ಕೆಟ್ಟರೆ ಜವಾಬ್ದಾರಿ ಯಾರು ಎಂದು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಹೋಟೆಲ್ ವ್ಯವಸ್ಥಾಪಕ ಸಂತೋಷ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸಾಕಷ್ಟು ಜಾಗರೂಕರಾಗಿಯೇ ಆಹಾರವನ್ನು ಸಿದ್ಧಪಡಿಸುತ್ತೇವೆ. ಆದರೂ ಈ ತಪ್ಪು ನಡೆದಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು.
----------