ಸಾರಾಂಶ
ಗದಗ: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ರೂಢಿಸಿಕೊಂಡು ಬಂದಿರುವ ನಾವು ಶ್ರದ್ಧಾ, ಭಕ್ತಿಯಿಂದ ದಸರಾ ಹಬ್ಬವನ್ನು ಆಚರಿಸುವ ಜತೆಗೆ ಶಕ್ತಿದೇವಿಯ ಆರಾಧನೆ ಮಾಡಿ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕು ಎಂದು ಬಳಗಾನೂರ ಚಿಕೇನಕೊಪ್ಪ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು ಹೇಳಿದರು.
ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ನಡೆದ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಒಂಬತ್ತು ದಿನಗಳ ನವರಾತ್ರಿ ನಂತರ, ದಶಮಿಯಂದು ರಾವಣನ ಪ್ರತಿಕೃತಿಗಳನ್ನು ಸುಡುವ ಮೂಲಕ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಭ್ರಮಿಸಲಾಗುತ್ತದೆ. ರೈತರು ಮತ್ತು ವ್ಯಾಪಾರಿಗಳು ತಮ್ಮ ಆಯುಧಗಳನ್ನು ಪೂಜಿಸುವ ಆಯುಧ ಪೂಜೆಯನ್ನು ಕೆಲವರು ಆಚರಿಸುತ್ತಾರೆ. ದುರ್ಗಾದೇವಿ ಮಹಿಷಾಸುರ ರಾಕ್ಷಸನನ್ನು ಸಂಹರಿಸಿ, ಲೋಕಕ್ಕೆ ಒಳಿತನ್ನು ತಂದ ಕಥೆಯನ್ನು ನವರಾತ್ರಿ ತಿಳಿಸುತ್ತದೆ. ವಿಜಯದಶಮಿಯ ದಿನದಂದು ಶ್ರೀರಾಮನು ರಾವಣನ ಮೇಲೆ ವಿಜಯ ಸಾಧಿಸಿದನು. ಈ ಹಬ್ಬವು ಕೆಟ್ಟತನದ ಮೇಲೆ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ ಎಂದು ತಿಳಿಸಿದರು.
ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಬಸವರಾಜ ಬಂಗಾರಶಟ್ಟರ, ಸುಜಾತಾ ಬಂಗಾರಶಟ್ಟರ, ಬಾಬಾಸಾ ಭಾಂಡಗೆ, ಅಶ್ವಿನಿಬಾಯಿ ಭಾಂಡಗೆ, ಅಂಬಾಸಾ ಖಟವಟೆ, ಗಾಯತ್ರಿ ಖಟವಟೆ, ಎಸ್.ಪಿ. ಸಂಶಿಮಠ, ಸದಾಶಿವಯ್ಯ ಮದರಿಮಠ, ಶರಣಬಸಪ್ಪ ಗುಡಿಮನಿ, ಸುವರ್ಣಾ ಮದರಿಮಠ, ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಗೀತಾ ಎಂ. ಹೂಗಾರ, ಸುಷ್ಮಾ ಖಂಡಪ್ಪಗೌಡ್ರ, ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಮತ್ತಿತರರು ಇದ್ದರು.ವಿರುಪಣ್ಣ ಬಳ್ಳೊಳ್ಳಿ ಸ್ವಾಗತಿಸಿದರು. ವಿ.ಎಂ. ಕುಂದ್ರಾಳಹಿರೇಮಠ ನಿರೂಪಿಸಿದರು. ಅಶ್ವಿನಿ ಎಸ್. ನೀಲಗುಂದ ವಂದಿಸಿದರು.