ಸಾರಾಂಶ
ನಮ್ಮ ಪೂರ್ವಿಕರು ಹಾಕಿಕೊಟ್ಟಿರುವ ಸನಾತನ ಸಂಸ್ಕೃತಿ, ಧರ್ಮ, ಅಧ್ಯಾತ್ಮ ಸದ್ಗುಣಗಳನ್ನು ಉಳಿಸಿಕೊಳ್ಳುವುದು ಕರ್ತವ್ಯವಾಗಿದೆ. ದೇವತಾರಾಧನೆಯಿಂದ ಸಕಾರಾತ್ಮಕ ಶಕ್ತಿ ಭೂಮಂಡಲದಲ್ಲಿ ಸೃಷ್ಟಿಯಾಗಲಿದೆ. ಪ್ರಾಕೃತಿಕ ವಿಕೋಪ, ದುಷ್ಟಶಕ್ತಿಗಳ ಧಮನಕ್ಕೆಇದು ನಾಂದಿಯಾಗಲಿದೆ. ಮೌಢ್ಯ ಬಿಟ್ಟು ನಂಬುಗೆಯ ಆರಾಧನೆ ಬೇಕಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಆತ್ಮಶುದ್ಧಿಯಿಂದ ಬದುಕನ್ನು ಸಾಕ್ಷಾತ್ಕಾರ ಕಾಣಲು ಭಗವಂತನ ಆರಾಧನೆ ಅವಶ್ಯವಿದೆ ಎಂದು ರಾಜ್ಯ ಅಹಿಂದ ಸಂಘಟನಾ ಸಮಿತಿ ಕಾರ್ಯಕಾರಿಣಿ ಕಾರ್ಯದರ್ಶಿ ಕೆ.ಎಚ್.ಮೋಹನ್ಕುಮಾರ್ ಹೇಳಿದರು.ಪಟ್ಟಣದ ಹೊನ್ನಾಳಮ್ಮ ದೇಗುಲದಲ್ಲಿ ಹೊನ್ನಾಳಮ್ಮ ದೇವಿಗೆ ಶುಕ್ರವಾರ ಏರ್ಪಡಿಸಿದ್ದ ವಿಶೇಷ ಪೂಜೆಯಲ್ಲಿ ಮಾತನಾಡಿ, ಶಿಥಿಲವಾಗಿದ್ದ ದೇಗುಲ ಜೀರ್ಣೋದ್ದಾರವನ್ನು ಸದ್ಭಕ್ತರ ಸಹಕಾರದಿಂದ ನೂತನವಾಗಿ ಪ್ರತಿಷ್ಟಾಪಿಸಿರುವುದರಿಂದ ದೈವಿಕ ಶಕ್ತಿ ಹೆಚ್ಚಿದೆ. ವೀರಭದ್ರಸ್ವಾಮಿ, ಲಕ್ಷ್ಮೀದೇವಿ, ದೊಡ್ಡಯ್ಯ, ಚಿಕ್ಕಯ್ಯ, ಹಳದಿರಣ್ಣ ಭಂಟ ದೇವರು ಗ್ರಾಮವನ್ನು ರಕ್ಷಿಸಲಿವೆ ಎಂಬುದು ಪ್ರಧಾನವಾಗಿದೆ ಎಂದರು.
ನಮ್ಮ ಪೂರ್ವಿಕರು ಹಾಕಿಕೊಟ್ಟಿರುವ ಸನಾತನ ಸಂಸ್ಕೃತಿ, ಧರ್ಮ, ಅಧ್ಯಾತ್ಮ ಸದ್ಗುಣಗಳನ್ನು ಉಳಿಸಿಕೊಳ್ಳುವುದು ಕರ್ತವ್ಯವಾಗಿದೆ. ದೇವತಾರಾಧನೆಯಿಂದ ಸಕಾರಾತ್ಮಕ ಶಕ್ತಿ ಭೂಮಂಡಲದಲ್ಲಿ ಸೃಷ್ಟಿಯಾಗಲಿದೆ. ಪ್ರಾಕೃತಿಕ ವಿಕೋಪ, ದುಷ್ಟಶಕ್ತಿಗಳ ಧಮನಕ್ಕೆಇದು ನಾಂದಿಯಾಗಲಿದೆ. ಮೌಢ್ಯ ಬಿಟ್ಟು ನಂಬುಗೆಯ ಆರಾಧನೆ ಬೇಕಿದೆ ಎಂದರು.ನಮ್ಮ ಮಕ್ಕಳಲ್ಲಿ ಅಕ್ಷರದ ಜತೆಯಲ್ಲಿ ಆಧ್ಯಾತ್ಮ, ಯೋಗ, ಧ್ಯಾನ, ಸಂಸ್ಕಾರದ ಅರಿವು ಮೂಡಿಸಬೇಕಿದೆ. ಆಧ್ಯಾತ್ಮಿಕ ಚಿಂತನೆ, ಧ್ಯಾನದಿಂದ ವ್ಯಕ್ತಿತ್ವ ವಿಕಸನಗೊಳಿಸಲಿದೆ. ಸಕಾರಾತ್ಮಕ ಗುಣದಿಂದ ನಮ್ಮ ಸುತ್ತಲಿನ ಪರಿಸರ ಸುಂದರವಾಗಲಿದೆ ಎಂದುರು.
ಧನಾತ್ಮಕ ವಾತಾವರಣಗಳು ನಮ್ಮ ಪೂಜೆ, ಹೋಮ ಹವನಾದಿಗಳಿಂದ ಲಭಿಸಲಿದೆ. ಪೂಜೆ, ತಿಲಕಧಾರಣೆ, ಘಂಟಾನಾದ ಪ್ರತಿಯೊಂದಕ್ಕೂ ವೈಜ್ಞಾನಿಕ ಹಿನ್ನೆಲೆಗಳಿವೆ. ಗ್ರಾಮೀಣ ಬದುಕಿನಲ್ಲಿ ಗೊತ್ತಿರುವುದು ಧರ್ಮ, ನ್ಯಾಯ, ದೇವರು ಮಾತ್ರ. ಕಪಟ ತಿಳಿಯದ ಮುಗ್ಧರಲ್ಲಿ ನಂಬುಗೆ ದೈವತ್ವದ ಒಂದು ಶಕ್ತಿಶಾಲಿ ಶಕ್ತಿಯಾಗಿದೆ ಎಂದು ನುಡಿದರು.ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೀಡಲಾಯಿತು. ಮುಖಂಡರಾದ ಗಾಡಿ ಕುಮಾರ್, ಸೀತಾರಾಮು, ಬಾಬು, ನಾಗರಾಜು, ರಾಘವೇಂದ್ರ, ಕೃಷ್ಣ ಇದ್ದರು.