ಗಾಣಿಗರು ಧರ್ಮ ಹಿಂದು ಎಂದೇ ಬರೆಸಿ

| Published : Oct 04 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮೀಕ್ಷೆಯಲ್ಲಿ ಗಾಣಿಗರು ಧರ್ಮದ ಜಾಗದಲ್ಲಿ ಹಿಂದೂ ಹಾಗೂ ಜಾತಿ, ಉಪಜಾತಿ ಜಾಗದಲ್ಲಿ ಗಾಣಿಗ ಎಂದು ಬರೆಸಿ ಎಂದು ಅಖಿಲ‌ ಭಾರತ ಗಾಣಿಗ ಸಮಾಜ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಮೀಕ್ಷೆಯಲ್ಲಿ ಗಾಣಿಗರು ಧರ್ಮದ ಜಾಗದಲ್ಲಿ ಹಿಂದೂ ಹಾಗೂ ಜಾತಿ, ಉಪಜಾತಿ ಜಾಗದಲ್ಲಿ ಗಾಣಿಗ ಎಂದು ಬರೆಸಿ ಎಂದು ಅಖಿಲ‌ ಭಾರತ ಗಾಣಿಗ ಸಮಾಜ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಸಂಘ ಹಾಗೂ ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್ ಸಹಯೋಗದಲ್ಲಿ ನಗರದ ವನಶ್ರೀ ಸಂಸ್ಥಾನಮಠದಲ್ಲಿ ಹಮ್ಮಿಕೊಂಡಿದ್ದ ಜಯದೇವ ಜಗದ್ಗುರಗಳ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಮಾಜಿಕವಾಗಿ ಹಿಂದುಳಿದ ಗಾಣಿಗರು ರಾಜ್ಯದಲ್ಲಿ ಸುಮಾರು 35-40 ಲಕ್ಷ‌ ಜನಸಂಖ್ಯೆ ಹೊಂದಿದೆ. ಇತ್ತೀಚೆಗೆ ಜಯಪ್ರಕಾಶ ಹೆಗ್ಡೆ ಅವರು ಸಲ್ಲಿಸಿದ ಕಾಂತರಾಜು ಆಯೋಗದ ವರದಿಯಲ್ಲಿ‌ ಸಮುದಾಯ ಕೇವಲ ಸುಮಾರು 7 ಲಕ್ಷ ಜನಸಂಖ್ಯೆ ತೋರಿಸಲಾಗಿದೆ. ಸಮುದಾಯದ ಏಳ್ಗೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಮಾಜ ಸಂಘಟನೆ ಅನಿವಾರ್ಯ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವುದು ಮುಖ್ಯ ಎಂದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಗೋ ಸಂತತಿ ಅನಾದಿ ಕಾಲದಿಂದಲೂ ಅನ್ನದಾತನ ಬೆನ್ನೆಲುಬು, ದೇಶದ ಸಂಪತ್ತು. ಹಿಂದೂ ಧರ್ಮದಲ್ಲಿ ಗಾಣಿಗ ಸಮಾಜ ಸಂಪೂರ್ಣ ಕೃಷಿಯನ್ನೇ ನಂಬಿ ಎತ್ತುಗಳ ಮೂಲಕ ಗಾಣದೆಣ್ಣೆ ತಯಾರಿಸುವ ಪವಿತ್ರ ಕಾಯಕ ಮಾಡಿಕೊಂಡು ಬಂದಿದೆ. ಹಾಗಾಗಿ ಗಾಣಿಗರು ಗೋ ಸಂತತಿಯ ಪಾಲನೆ ಜೊತೆಗೆ ಅವುಗಳ ಹತ್ಯೆಯನ್ನು ಖಂಡಿಸಿ ಗೋ ರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಜಿ.ಎಸ್.ನ್ಯಾಮಗೌಡ ಹಾಗೂ ಬಿ.ಜಿ.ಪಾಟೀಲ ಹಲಸಂಗಿ, ಉಪನ್ಯಾಸಕಿ ಮಹಾನಂದಾ ಬಿರಾದಾರ ಮಾತನಾಡಿದರು. ಎಸ್ಎಸ್ಎಲ್‌ಸಿ, ಪಿಯುಸಿ‌ ಹಾಗೂ ನೀಟ್ ನಲ್ಲಿ ಅತ್ಯಧಿಕ ಅಂಕ ಪಡೆದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು.

ವನಶ್ರೀ ಸಂಸ್ಥಾನಮಠದ ಅಧ್ಯಕ್ಷ ಸಿದ್ದಮುತ್ಯಾ, ಹಿರೇರೂಗಿ ಸುಗಲತಾಯಿ ಮಾತೋಶ್ರೀ, ಸಂಗನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ರಮೇಶ ಭೂಸನೂರ, ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಪ್ರ.ಕಾರ್ಯದರ್ಶಿ ಬಾಬು ಸಜ್ಜನ, ಮಾಜಿ‌ ಅಧ್ಯಕ್ಷ ಶರಣಬಸಪ್ಪ ಅರಕೇರಿ, ಬಾಬುಸಾಹುಕಾರ ಮೇತ್ರಿ, ಎನ್.ಎಸ್.ಲೋಣಿ, ಎಸ್.ಎಸ್.ಶಿರಾಡೋಣ, ಎನ್.ಎಸ್.ದೇವರ, ಗುರುನಾಥ ಅಂದೇವಾಡಿ, ತಾಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.