ದಾವಣಗೆರೆಯಲ್ಲಿ ಷಹಾಜಿ ಬೋಸ್ಲೆ ಸಮಾಧಿಗೆ ಕಾಯಕಲ್ಪಕ್ಕೆ ಲೇಖಕ ದತ್ತಾಜಿ ನಲವಡೆ ಒತ್ತಾಯ

| Published : Jan 23 2025, 12:50 AM IST

ದಾವಣಗೆರೆಯಲ್ಲಿ ಷಹಾಜಿ ಬೋಸ್ಲೆ ಸಮಾಧಿಗೆ ಕಾಯಕಲ್ಪಕ್ಕೆ ಲೇಖಕ ದತ್ತಾಜಿ ನಲವಡೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಯೋಧ ಷಹಾಜಿ ರಾಜೇ ಬೋಸ್ಲೆಯವರ ಸಮಾಧಿ ಸ್ಮಾರಕದ ಬಾಕಿ ಕೆಲಸ ಪೂರ್ಣಗೊಳಿಸಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಮಹಾರಾಷ್ಟ್ರದ ಪುಣೆಯ ಹಿರಿಯ ಲೇಖಕ, ಇತಿಹಾಸ ಸಂಶೋಧಕ, ಮಾವ್ಲಾ ಜವಾನ್ ಸಂಸ್ಥೆಯ ಸಂಸ್ಥಾಪಕ ದತ್ತಾಜಿ ಲಕ್ಷ್ಮಣ್ ನಲವಡೆ ಒತ್ತಾಯಿಸಿದರು.

ರಾಜ್ಯ ಸರ್ಕಾರಕ್ಕೆ ಆಗ್ರಹ । ಛತ್ರಪತಿ ಶಿವಾಜಿ ಮಹಾರಾಜರ ತಂದೆ ಸಮಾಧಿ ರಾಷ್ಟ್ರೀಯ ಸ್ಮಾರಕ ಮಾಡಲು ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಮಹಾನ್ ಯೋಧ ಷಹಾಜಿ ರಾಜೇ ಬೋಸ್ಲೆಯವರ ಸಮಾಧಿ ಸ್ಮಾರಕದ ಬಾಕಿ ಕೆಲಸ ಪೂರ್ಣಗೊಳಿಸಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಗಮನಹರಿಸಬೇಕು ಎಂದು ಮಹಾರಾಷ್ಟ್ರದ ಪುಣೆಯ ಹಿರಿಯ ಲೇಖಕ, ಇತಿಹಾಸ ಸಂಶೋಧಕ, ಮಾವ್ಲಾ ಜವಾನ್ ಸಂಸ್ಥೆಯ ಸಂಸ್ಥಾಪಕ ದತ್ತಾಜಿ ಲಕ್ಷ್ಮಣ್ ನಲವಡೆ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರೂವರೆ ಶಕತಮಾನಗಳಿಂದ ಹೊದಿಗೆರೆಯಲ್ಲಿ ಸ್ವತಂತ್ರ ರಾಷ್ಟ್ರದ ಸಂಸ್ಥಾಪಕ ಮತ್ತು ಭಾರತದ ಮಹಾನ್ ರಾಷ್ಟ್ರ ಪುರುಷ ಷಹಾಜಿ ರಾಜೇ ಬೋಸ್ಲೆ ಸಮಾಧಿ ಸ್ಮಾರಕವಾಗಿದ್ದು, ಅದಕ್ಕೆ ಕಾಯಕಲ್ಪ ನೀಡುವ ಕೆಲಸವನ್ನು ಆದ್ಯತೆ ಮೇಲೆ ಮಾಡಬೇಕು ಎಂದರು.

ಷಹಾಜಿ ರಾಜೇ ಬೋಸ್ಲೆಂ 1664ರ ಜ.1ರಂದು ಇದೇ ಹೊದಿಗೆರೆ ಅರಣ್ಯ ಪ್ರದೇಶದಲ್ಲಿ ಕಾಲವಾದರು. ಷಹಜಿಯವರ ವೀರಪುತ್ರ ಛತ್ರಪತಿ ಶಿವಾಜಿ ಮಹಾರಾಜರು ವಿಶ್ವದ ಮೊದಲ ಪ್ರಜಾಪ್ರಭುತ್ವ ರಾಷ್ಟ್ರದ ಸೃಷ್ಟಿಕರ್ತರಾಗಿದ್ದು, ಅದೇ ಸ್ಥಳದಲ್ಲಿ ಷಹಾಜಿಯವರ ಸಮಾಧಿ ಸ್ಮಾರಕ ಸ್ಥಾಪಿಸಿದರು. ಷಹಾಜಿಯವರ ಮರಣ ವಾರ್ಷಿಕೋತ್ಸವವನ್ನು ಪ್ರತಿ ವರ್ಷ ಜ.23ರಂದು ಈ ಸ್ಥಳದಲ್ಲೇ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಪುರಾತತ್ಮ ಇಲಾಖೆ ಅಧೀನದ ಷಹಾಜಿ ರಾಜೇ ಬೋಸ್ಲೆಯವರ ಸಮಾಧಿ ಸ್ಮಾರಕಕ್ಕೆ ಗೌರವಿಸಲು ದೇಶಾದ್ಯಂತ ಲಕ್ಷಾಂತರ ದೇಶ ಭಕ್ತರು ಬಂದು ಹೋಗುತ್ತಾರೆ. ಸುರಕ್ಷಿತ ಸ್ಮಾರಕವಾಗಿದ್ದರೂ ಭಾರತ ಸರ್ಕಾರ ಷಹಾಜಿ ರಾಜೇ ಸ್ಮಾರಕಗಳ ಗಣನೀಯ ಅಭಿವೃದ್ಧಿ ಮತ್ತು ಪುನಃ ಸ್ಥಾಪನೆ ಮಾಡಿಲ್ಲ. ರಾಜ್ಯ ಸರ್ಕಾರಕ್ಕೆ ಹಣ ಮಂಜೂರು ಮಾಡಿದ ನಂತರವೂ ಕೇಂದ್ರದ ಅನುಮೋದನೆ ಇಲ್ಲದ ಕಾರಣಕ್ಕೆ ಸಮಾಧಿಯನ್ನು ಅಲಂಕರಿಸಲು ಸಾಧ್ಯವಿಲ್ಲ ಎಂದು ಹೇಳಿ. ಕೇಂದ್ರ ಸರ್ಕಾರವೇ ಪುರಾತತ್ಮ ಇಲಾಖೆಯಿಂದ ಸಮಾಧಿ ಅಭಿವೃದ್ಧಿಪಡಿಸಲಿ ಎಂದು ಆಗ್ರಹಿಸಿದರು.

ಹೊದಿಗೆರೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರದಿಂದ ಷಹಾಜಿ ರಾಜೇ ಬೋಸ್ಲೆಯವರ ಭವ್ಯವಾದ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಬೇಕು. ದೇಶದ ಇತಿಹಾಸಕ್ಕೆ ಅಪ್ರತಿಮ ದೇಶಭಕ್ತ ಛತ್ರಪತಿ ಶಿವಾಜಿ ಮಹಾರಾಜರಂತಹ ಮಗನನ್ನು ನೀಡಿದ ಷಹಾಜಿ ರಾಜೇ ಬೋಸ್ಲೆಯವರ ಸಮಾಧಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಡೆಗೆ ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ದತ್ತಾಜಿ ಲಕ್ಷ್ಮಣ ನಲವಡೆ ಮನವಿ ಮಾಡಿದರು.

ಸಮಾಜದ ಮುಖಂಡರಾದ ವಿಜಯ್ ಜಾಧವ್‌, ಸುನಿಲ್ ಜಂಗಮ ಸ್ವಾಮಿ, ಅಣ್ಣೋಜಿರಾವ್ ನಲವಾಡೆ, ರೋಹಿತ್‌ ನಲವಾಡೆ, ಗೋವಿಂದರಾಜ ಬಿರ್ಜೆ, ಪ್ರಶಾಂತ ರಾವ್‌ ಬೋಸ್ಲೆ ಇತರರು ಇದ್ದರು.

ಇಂದು ಷಹಾಜಿಯವರ 361ನೇ ಪುಣ್ಯಾರಾಧನೆ:

ಹೊದಿಗೆರೆ ಗ್ರಾಮದಲ್ಲಿ ಷಹಾಜಿ ರಾಜೇ ಬೋಸ್ಲೆಯವರ ಸ್ಮಾರಕದ ಆವರಣದಲ್ಲಿ ಜ.23ರಂದು ಬೆಳಿಗ್ಗೆ 11.30ಕ್ಕೆ ಷಹಾಜಿಯವರ 361ನೇ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಲಿದೆ ಎಂದು ದತ್ತಾಜಿ ಲಕ್ಷ್ಮಣ್ ನಲವಡೆ ತಿಳಿಸಿದರು.

ಬೆಂಗಳೂರಿನ ಗವಿಪುರಂನ ಶ್ರೀ ಭವಾನಿ ದತ್ತ ಪೀಠದ ಶ್ರೀ ಗೋಸಾಯಿ ಮಹಾ ಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಸಾನಿಧ್ಯದಲ್ಲಿ ಸಂಸ್ಥೆಯ ಅಧ್ಯಕ್ಷ ವೈ.ಮಲ್ಲೇಶ ರಾವ್‌ ಸಿಂಧೆ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಕಾರ್ಮಿಕ ಸಚಿವ ಸಂತೋಷ್ ಲಾಡ್‌, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.