ಸಾರಾಂಶ
ಗಂಗಾವತಿ:
ಬರವಣಿಗೆ ತಪಸ್ಸು ಇದ್ದಂತೆ ಎಂದು ಹಾಸ್ಯ ಸಾಹಿತಿ ಬಿ. ಪ್ರಾಣೇಶ ಹೇಳಿದರು.ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಇಂದಿರೇಶ ಪ್ರಕಾಶನದ ವತಿಯಿಂದ ಹಮ್ಮಿಕೊಂಡಿದ್ದ ಹಾಲೇಶ ಗುಂಡಿ ವಿರಚಿತ ದೇಸಿಗಿತಿ ಕಾದಂಬರಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸುತ್ತಲಿನ ಪರಿಸರದ ಅನುಭವ, ಸಾಮಾಜಿಕ ಮೌಢ್ಯಗಳನ್ನು ಈ ಕಾದಂಬರಿಯಲ್ಲಿ ವಿಮರ್ಶಿಸಲಾಗಿದೆ. ಹೆಣ್ಣಿನ ನೋವುಗಳನ್ನು ದೇಸಿಗಿತಿ ತೀವ್ರವಾಗಿ ಚಿತ್ರಿಸುತ್ತದೆ ಎಂದರು.
ಬರವಣಿಗೆ ತಪಸ್ಸಿದ್ದಂತೆ. ಅಪಾರ ಓದು, ಅನುಭವದ ಮೂಲಕ ಅಭಿವ್ಯಕ್ತಿ ರೂಪುಗೊಳ್ಳುತ್ತದೆ. ಬರಹಗಾರರು ಕೃತಿಗಳನ್ನು ತಪ್ಪದೇ ಓದಬೇಕು. ಹೃದಯದ ಭಾವನೆ-ಬಾಳಿನ ಅನುಭವ ಬರಹಕ್ಕೆ ಶಕ್ತಿ ತುಂಬುತ್ತದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಅಪಾರ ಜಿಲ್ಲಾಧಿಕಾರಿ ಸಿದ್ಧರಾಮೇಶ, ಕಂದಾಯ ಇಲಾಖೆ ಜನರು ನಿತ್ಯ ಒಡನಾಟದಲ್ಲಿರುವ ಕ್ಷೇತ್ರ. ಜನರ ಬೇಕು-ಬೇಡಗಳಿಗೆ ಸ್ಪಂದಿಸುವ ಸದಾಕಾರ್ಯಶೀಲರಾಗಿರುವ ಇಲಾಖೆಯಲ್ಲಿದ್ದು ಬರವಣಿಗೆಗೆ ತೊಡಗಿರುವುದು ಸಂತಸದ ಸಂಗತಿ. ಯುವ ಬರಹಗಾರ ಹಾಲೇಶ ಮೊದಲ ಕೃತಿಯಾಗಿ ದೇಸಿಗಿತಿ ಕಾದಂಬರಿ ಬರೆದಿರುವುದು ನಮ್ಮ ಇಲಾಖೆಗೆ ಹೆಮ್ಮೆ ಎನಿಸಿದೆ. ನಾವು ಕಂಡುಂಡ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರಹಾಕಬೇಕು ಎಂದರು.
ಪುಸ್ತಕ ಕುರಿತು ಕೊಪ್ಪಳ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಮುಮ್ತಾಜ್ ಬೇಗಂ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ಪಾಟೀಲ, ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರಡಿ, ಶಿವಶಂಕರ, ಲೇಖಕ ಹಾಲೇಶ, ತಾಲೂಕು ಕಸಾಪ ಅಧ್ಯಕ್ಷ ರುದ್ರೇಶ ಆರ್ಹಾಳ, ಭೀಮಸೇನ್ ರಾವ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ಡಾ. ಕೀರ್ತಿರಾಣಿ, ಶಿವಾನಂದ ತಿಮ್ಮಾಪುರ, ಗುಂಡೂರು ಪವನಕುಮಾರ, ಶ್ರೀನಿವಾಸ ಅಂಗಡಿ, ರಮೇಶ ಬಾಳಿಕಾಯಿ ಇದ್ದರು.