ಪತ್ರಿಕೆ ಮನೆಗಳಿಗೆ ತಲುಪದಿದ್ದರೆ ಬರವಣಿಗೆ ನಿಷ್ಪ್ರಯೋಜಕ

| Published : Oct 25 2024, 01:10 AM IST

ಸಾರಾಂಶ

ಪತ್ರಿಕೆಗಳು ಏಷ್ಠೇ ಸುದ್ದಿ ಪ್ರಕಟಿಸಿದರೂ ಅವುಗಳನ್ನು ಓದುಗರ ಮನೆ ಬಾಗಿಲಿಗೆ ಸಕಾಲಕ್ಕೆ ತಲುಪಿಸದಿದ್ದರೆ ಬರವಣಿಗೆ ನಿಷ್ಪ್ರಯೋಜಕವಾಗುತ್ತದೆ

ಕನ್ನಡಪ್ರಭ ವಾರ್ತೆ ಮಧುಗಿರಿ

ಪತ್ರಿಕೆಗಳು ಏಷ್ಠೇ ಸುದ್ದಿ ಪ್ರಕಟಿಸಿದರೂ ಅವುಗಳನ್ನು ಓದುಗರ ಮನೆ ಬಾಗಿಲಿಗೆ ಸಕಾಲಕ್ಕೆ ತಲುಪಿಸದಿದ್ದರೆ ಬರವಣಿಗೆ ನಿಷ್ಪ್ರಯೋಜಕವಾಗುತ್ತದೆ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕದಿಂದ ದಿನ ಪತ್ರಿಕೆ ಹಂಚುವ ಹುಡುಗರಿಗೆ ಗುರುವಾರ ಸ್ಪೆಟರ್‌ ವಿತರಿಸಿ ಮಾತನಾಡಿದರು.

ಪತ್ರಿಕೆಗಳನ್ನು ಮನೆ ಮನೆಗೆ ಹಂಚುವ ಹುಡುಗರ ಕಾರ್ಯ ಶ್ಲಾಘನೀಯ. ಪತ್ರಿಕೆ ಹಂಚುವ ಹುಡುಗರಿಗೆ ಕೆಲವು ಓದುಗರು ಸರಿಯಾಗಿ ಪೇಪರ್‌ ಹಾಕಲ್ಲ ಎಂದು ದೂರುತ್ತಾರೆಯೇ ವಿನಹ ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಆ ಮಗುವಿನ ಶ್ರಮಕ್ಕೆ ಒಂದು ಧನ್ಯವಾದ ಹೇಳುವುದಿಲ್ಲ. ಪತ್ರಿಕೆ ಹಂಚಿದ ಅಬ್ದುಲ್‌ ಕಲಾಂ ದೇಶದ ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.

ಮಕ್ಕಳು ಬಾಲ್ಯದಲ್ಲಿಯೇ ಜೀವನ ರೂಪಿಸಿಕೊಳ್ಳುವ ಜೊತೆಗೆ ಗುಣಮಟ್ಟದ ಶಿಕ್ಷಣ ಕಲಿತು ಉನ್ನತ ಹುದ್ದೆ ಪಡೆದು ಮುಂದೆ ಬರಬೇಕು. ಈಗಾಗಲೇ ರಾಮಕೃಷ್ಣ ಸೇವಾಶ್ರಮದಿಂದ ಮಳೆಯಿಂದ ಹೆಚ್ಚು ಹಾನಿಗೊಳಗಾಗಿರುವ ಪ್ರದೇಶಗಳಾದ ಕೇರಳದ ವಯನಾಡು, ನಮ್ಮ ರಾಜ್ಯದ ಬೆಳಗಾವಿ, ಗೋಕಾಕ್‌ ಹಾಗೂ ಆಂಧ್ರಪ್ರದೇಶ ವಿಜಯವಾಡ, ಅನಂತಪುರದಲ್ಲಿ ಆಶ್ರಮದಿಂದ ಸುಮಾರು 12 ಸಾವಿರ ನಿರಾಶ್ರಿತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಋುತುಮಾನಗಳನ್ನು ಅನುಸರಿಸಿ ಪತ್ರಿಕೆ ಹಂಚುವ ಹುಡುಗರ ಆರೋಗ್ಯ ಮತ್ತು ಚೈತನ್ಯ ಶೀಲರನ್ನಾಗಿಸಲು ಅಗತ್ಯವಾದ ಸ್ಪೆಟರ್‌ ಹುಡುಪುಗಳನ್ನು ವಿತರಿಸಲಾಗಿದೆ ಎಂದರು.

ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಎಚ್‌. ಚಂದ್ರಕಾಂತ್‌, ಪ್ರಧಾನ ಕಾರ್ಯದರ್ಶಿ ಎಂ.ಎನ್‌.ರಾಜೇಂದ್ರ, ಜಿಲ್ಲಾ ನಿರ್ದೇಶಕ ಮಹಾರಾಜು, ವಿತರಕರ ಸಂಘದ ಅಧ್ಯಕ್ಷ ಶೇಷನಾಯಕ್, ಕಾರ್ಯದರ್ಶಿ ಚಿರಂಜೀವಿ, ಡಿ.ಎಚ್‌,ನಾಗಾರಜು, ಎಂ.ಎಸ್‌.ಶಂಕರನಾರಾಯಣ್‌, ಪತ್ರಿಕೆ ಹಂಚುವ ಹುಡುಗರು ಇದ್ದರು.