ಉಡುಪಿ ಜಿಲ್ಲೆಯ 91 ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣ

| Published : Jun 14 2024, 01:03 AM IST

ಸಾರಾಂಶ

ಶಾಸಕ ಗುರುರಾಜ ಗಂಟಿಹೊಳೆ ಅವರ ಅಪೇಕ್ಷೆಯಂತೆ ಬೈಂದೂರು ವಿಧಾನಸಭಾ ವ್ಯಾಪ್ತಿಯ ೧೧ ಶಾಲೆಗಳು ಸೇರಿ ಒಟ್ಟು ೯೧ ಶಾಲೆಗಳಲ್ಲಿ ಯಕ್ಷ ಶಿಕ್ಷಣ ನಡೆಸಲು ಯೋಜಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಕಳೆದ ೧೭ ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದು, ಈ ವರ್ಷ ಶಾಸಕ ಗುರುರಾಜ ಗಂಟಿಹೊಳೆ ಅವರ ಅಪೇಕ್ಷೆಯಂತೆ ಬೈಂದೂರು ವಿಧಾನಸಭಾ ವ್ಯಾಪ್ತಿಯ ೧೧ ಶಾಲೆಗಳು ಸೇರಿ ಒಟ್ಟು ೯೧ ಶಾಲೆಗಳಲ್ಲಿ ಯಕ್ಷ ಶಿಕ್ಷಣ ನಡೆಸಲು ಯೋಜಿಸಿದೆ.

ಈ ಪ್ರಯುಕ್ತ ಯಕ್ಷಗಾನ ಗುರುಗಳ ಸಮಾಲೋಚನಾ ಸಭೆ ಇತ್ತೀಚೆಗೆ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದ ಹೊರಾಂಗಣದಲ್ಲಿ ಜರುಗಿತು.

ಉಡುಪಿ ಕ್ಷೇತ್ರದ ಶಾಸಕ, ಟ್ರಸ್ಟ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯನಿರ್ವಹಣೆಯಲ್ಲಿ ಕಲಾರಂಗದ ಕಾರ್ಯಕರ್ತರ ದುಡಿಮೆ ದೊಡ್ಡದು, ನಾವೆಲ್ಲ ಒಟ್ಟಾಗಿ ಈ ಮಹಾಭಿಯನವನ್ನು ಯಶಸ್ವಿಯಾಗಿಸೋಣ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವ ಈ ಕಲಾಪ್ರಕಾರ ಉಳಿಸಿ ಬೆಳೆಸುವಲ್ಲಿ ಯಕ್ಷ ಗುರುಗಳ ಕೊಡುಗೆ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಹಿರಿಯ ಟ್ರಸ್ಟಿ ಎಸ್.ವಿ. ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿಕಡೆಕಾರ್ ಗುರುಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ಕೋಶಾಧಿಕಾರಿ ಎಚ್.ಎನ್. ಶೃಂಗೇಶ್ವರ, ಟ್ರಸ್ಟಿಗಳಾದ ವಿ.ಜಿ. ಶೆಟ್ಟಿ, ನಾರಾಯಣ ಎಂ. ಹೆಗಡೆ, ಮೀನಾಲಕ್ಷಣಿ ಅಡ್ಯಂತಾಯ, ಗಣೇಶ್ ಬ್ರಹ್ಮಾವರ, ನಾಗರಾಜ ಹೆಗಡೆ ಉಪಸ್ಥಿತರಿದ್ದರು.

ಈ ಬಾರಿ ೪೦ ಮಂದಿ ಯಕ್ಷಗಾನ ಕಲಾವಿದರು ಗುರುಗಳಾಗಿ ಸೇವೆ ಸಲ್ಲಿಸಲಿರುವರು. ಗುರುಗಳಿಗೆ ಶಾಲೆಗಳನ್ನು ಹಂಚಿಕೆಮಾಡಿ ಅಗತ್ಯ ಸೂಚನೆ ನೀಡಲಾಯಿತು.